ಹೇಮಾದಪಂತ
(ಗೋವಿಂದ ರಘುನಾಥ ದಾಬೋಲ್ಕರ್) - ಅಣ್ಣಾಸಾಹೇಬ - ಮರಾಠಿ ಭಾಷೆಯಲ್ಲಿ ಶ್ರೀ ಸಾಯಿ ಸಚ್ಚರಿತೆಯ ಮೂಲ ಲೇಖಕರು.
ಶ್ರೀ ಸಾಯಿ ಸಚ್ಚರಿತೆಯು ಅಣ್ಣಾಸಾಹೇಬ ದಾಬೋಲ್ಕರ್ ರವರಿಂದ ರಚಿಸಲ್ಪಟ್ಟಿತ್ತಾದರೂ ಪ್ರತಿ ಅಧ್ಯಾಯದ ಕೊನೆಯಲ್ಲಿ ಸಾಯಿಬಾಬಾರವರ ಪ್ರೇರಣೆಯಂತೆ ಹೇಮಾದಪಂತನಿಂದ ರಚಿಸಲ್ಪಟ್ಟಿತೆಂದು ಕೃತಿಯೇ ತಿಳಿಸುತ್ತದೆ. ಸಾಯಿಬಾಬಾರವರು ಮೊದಲ ಭೇಟಿಯಲ್ಲೇ ದಾಬೋಲ್ಕರ್ಗೆ ಇತ್ತ ಹೆಸರು 'ಹೇಮಾದಪಂತ' ಎಂಬುದು. ಇದರ ಪ್ರಾಮುಖ್ಯತೆಯನ್ನು ಸಾಯಿ ಸಚ್ಚರಿತೆಯ 2ನೇ ಅಧ್ಯಾಯದಲ್ಲಿ ತಿಳಿಸಿರುತ್ತಾರೆ.
ಶ್ರೀ ದಾಬೋಲ್ಕರ್ ನು 1859ರಲ್ಲಿ ಒಂದು ಬಡ ಅದ್ಯಾಗೌಡಬ್ರಾಹ್ಮಣ ಕುಟುಂಬದಲ್ಲಿ ಥಾನಾ ಜಿಲ್ಲೆಯ ಕೆಳವೇ ಮಾಹಿಮ್ ಎಂಬ ಹಳ್ಳಿಯಲ್ಲಿ ಜನಿಸಿದನು. ಅವನ ತಂದೆ ಮತ್ತು ತಾತ ಬಹಳ ಧಾರ್ಮಿಕ ವ್ಯಕ್ತಿಗಳಾಗಿದ್ದರು. ಬಡತನದಿಂದಾಗಿ ಪ್ರಾಥಮಿಕ ಶಿಕ್ಷಣ ಅವನ ಊರಿನಲ್ಲೂ, ಆಂಗ್ಲ ಶಾಲೆ 5ನೇ ತರಗತಿವರೆಗೆ ಪುಣೆಯಲ್ಲೂ ನಡೆಯಿತು. ಅದನ್ನು ಮುಂದುವರಿಸಲು ಆಗದೆ ಸಾರ್ವಜನಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ತನ್ನ ಸ್ವಗ್ರಾಮದಲ್ಲಿ ಶಾಲೆಯ ಮಾಸ್ತರನಾದನು.
ಅವನ ಒಳ್ಳೆಯ ಗುಣ, ಬುದ್ಧಿವಂತಿಕೆ ಮತ್ತು ಕಾರ್ಯವೈಖರಿಯನ್ನು ಗಮನಿಸಿದ ಕೊಲಾಬಾ ಜಿಲ್ಲೆಯ ಮಾಮಲೇದಾರನಾಗಿದ್ದ ಶ್ರೀ ಸಾಬಾಜಿ ಚಿಂತಾಮನ್ ಚಿಟ್ನಿಸ್ ನು ಅವನನ್ನು ತನ್ನ ಕಚೇರಿಯಲ್ಲಿ ತಲಾಟಿಯಾಗಿ (ಹಳ್ಳಿಯ ಕ್ಲರ್ಕ್) ನೇಮಿಸಿ ನಂತರ ಅವಲ್ (ಕ್ಲರ್ಕ್) ಆಗಿ ನೇಮಿಸಿದನು. ಮತ್ತೆ ಅರಣ್ಯ ನಿರ್ವಹಣಾಧಿಕಾರಿಯಾಗಿ, ನಂತರ ಕ್ಷಾಮ ನಿರ್ವಹಣಾ ಕಾರ್ಯದಲ್ಲಿ ವಿಶೇಷ ಅಧಿಕಾರಿಯಾಗಿ ಬ್ರೋಚ್ (ಗುಜರಾತ್)ನಲ್ಲಿ ನೇಮಕಾತಿ ಪಡೆದು ಅಲ್ಲಿ ತೃಪ್ತಿಕರವಾದ ಸೇವೆ ಸಲ್ಲಿಸಿದನು. 1901ರಲ್ಲಿ ಥಾನಾ ಜಿಲ್ಲೆಯ ಷಾಹಾಪುರದಲ್ಲಿ ಮಾಮಲೇದಾರನಾಗಿ ಮತ್ತು 1903ರಲ್ಲಿ ಬಾಂದ್ರಾದಲ್ಲಿ ಮೊದಲ ದರ್ಜೆಯ ಸ್ಥಾನಿಕ ನ್ಯಾಯಾಧೀಶನಾಗಿ ನೇಮಕನಾಗಿ 1907ರವರೆಗೆ ಸೇವೆಸಲ್ಲಿಸಿದನು. ಅಲ್ಲಿಂದ ಮುರ್ಬಾದ್, ಆನಂದ್, ಬೋರ್ಸಾಡ್(ಖೇಡಾಜಿಲ್ಲೆ)ಗಳಲ್ಲಿ ಕೆಲಸ ಮಾಡಿ 1910ರಲ್ಲಿ ಮತ್ತೆ ಬಾಂದ್ರಾಗೆ ವರ್ಗಾಯಿಸಲ್ಪಟ್ಟನು. ಆ ವರ್ಷಗಳಲ್ಲಿ ಶಿರಡಿಗೆ ಹೋಗಿ ಸಾಯಿಬಾಬಾರವರ ದರ್ಶನ ಪಡೆಯುವ ಅಧೃಷ್ಟ ದೊರಕಿತು. 1916ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದನು. ಅಲ್ಪ ಸಮಯದವರೆಗೆ ಸರ್ಕಾರದ ತಾತ್ಕಾಲಿಕ ನೌಕರಿ ಮಾಡಿದನಂತರ ಬಾಬಾರವರ ಸೇವೆಯಲ್ಲಿ ತನ್ನನ್ನು ತಾನು ಆತ್ಮಪೂರ್ವಕವಾಗಿ ತೊಡಗಿದಿಕೊಂಡನು. ಅಲ್ಲಿಂದ 1929ರಲ್ಲಿ ಅವನ ದೇಹಾವಸಾನದ ವರೆಗೆ ಶಿರಡಿಯ ಸಾಯಿಬಾಬಾ ಸಂಸ್ಥಾನವನ್ನು ಬಹಳ ಸಮರ್ಪಕವಾಗಿ ನಡೆಸಿಕೊಂಡು ಬಂದನು. ಅವನು ಪತ್ನಿ, ಒಬ್ಬ ಮಗ ಮತ್ತು ಐವರು ಪುತ್ರಿಯರನ್ನು ಒಳಗೊಂಡ ಸುಖೀಕುಟುಂಬ ಜೀವನ ನಡೆಸಿದನು.
ಆಧಾರ: ಶ್ರೀ ಏನ್. ವಿ. ಗುಣಾಜಿಯವರ ಆಂಗ್ಲ ಭಾಷೆಯ ಪುಸ್ತಕದ ಮೊದಲ ಮುದ್ರಣದಲ್ಲಿ ಮೂಲ ಮರಾಠಿ ಗ್ರಂಥದಿಂದ ಆಯ್ದು ಸೇರಿಸಲ್ಪಟ್ಟಿದೆ.
No comments:
Post a Comment