॥ ಅಥಃ ಶ್ರೀ ಸಾಯಿ ಸಚ್ಚರಿತೆ ॥
"ನಾಮಕರಣ ಮಹೋತ್ಸವದ ಬಗ್ಗೆ ವಿವರಿಸುವ ಉದ್ದೇಶ"
ಶ್ರೀ ಗಣೇಶನಿಗೆ ಪ್ರಣಾಮಗಳು.
ಶ್ರೀ ಸರಸ್ವತಿಗೆ ಪ್ರಕಾಮಗಳು.
ಶ್ರೀ ಗುರುವಿಗೆ ಪ್ರಣಾಮಗಳು.
ಶ್ರೀ ಕುಲದೇವತೆಗೆ ಪ್ರಣಾಮಗಳು.
ಶ್ರೀ ಸೀತಾರಾಮಚಂದ್ರನಿಗೆ ಪ್ರಣಾಮಗಳು.
ಶ್ರೀ ಸದ್ಗುರು ಸಾಯಿನಾಥನಿಗೆ ಪ್ರಣಾಮಗಳು.
ಹಿಂದಿನ ಅಧ್ಯಾಯದಲ್ಲಿ ದೇವತೆಗಳಿಗೆ, ಕುಟುಂಬದ ಹಿರಿಯರಿಗೆ ಮತ್ತು ಗುರುಗಳಿಗೆ ಪ್ರಾರ್ಥಿಸುತ್ತ ಮಂಗಳಾಚರಣೆಯನ್ನು ಮಾಡಿ ಆಯಿತು.
ಸಾಯಿಸಚ್ಚರಿತೆಯ ಬೀಜಗಳನ್ನು ಬಿತ್ತಿದಮೇಲೆ ಕೈಗೆತ್ತಿಕೊಂಡ ಯೋಜನೆಯ ಉದ್ದೇಶವನ್ನು ಪ್ರಾರಂಭಿಸೋಣ. ||1||
ನಾನು ಈಗ ಲೇಖಕನ ಅರ್ಹತೆ ಮತ್ತು ಸಂಕಲ್ಪವನ್ನು ಸಂಕ್ಷಿಪ್ತವಾಗಿ ತಿಳಿಯಪಡಿಸುತ್ತೇನೆ. ಅದರಿಂದ ಶ್ರೋತೃಗಳು ಅನಾಯಾಸವಾಗಿ ಗ್ರಂಥದ ಒಳನೋಟವನ್ನು ಪಡೆಯುವರು. ||2||
ಮೊದಲನೆಯ ಅಧ್ಯಾಯದಲ್ಲಿ, ಗೋಧಿಯನ್ನು ಬೀಸಿ ಹಿಟ್ಟು ಮಾಡುವ ಮತ್ತು ಕಾಲರಾರೋಗವನ್ನು ತಡೆದ ಬಗ್ಗೆ ಹಳ್ಳಿಗರಿಗೆ ಆಶ್ಚರ್ಯ ಉಂಟುಮಾಡುವ ರೀತಿಯಲ್ಲಿ ತಿಳಿಸಲಾಯಿತು. ||3||
ಈ ರೀತಿ ಸಾಯಿಯ ಲೀಲೆಗಳು ಅವರ್ಣನೀಯವಾದುವು. ಅವುಗಳನ್ನು ಕೇಳಿದರೇನೇ ಮುದಗೊಳಿಸುತ್ತವೆ. ಆ ಸಂತೋಷವು ಪ್ರೀತಿಯ ಸಾಗರದಿಂದ ಉಕ್ಕಿಬಂದಿದೆ, ಕಾವ್ಯರೂಪವನ್ನು ಪಡೆದುಕೊಂಡಿದೆ. ||4||
ಆದುದರಿಂದ ಸಾಯಿಗೆ ನನ್ನ ಧನ್ಯವಾದ. ಭಕ್ತರಿಗೆ ಬೋಧಪ್ರದವಾದ ಅನುಭವಗಳನ್ನು ನನ್ನ ಕೈಲಾದಮಟ್ಟಿಗೆ ನೆನಪಿಸಿಕೊಂಡು ಬರೆಯಲು ಯೋಚಿಸಿದೆ. ಅವುಗಳು ಅವರ ಪಾಪಗಳನ್ನು ನಾಶಮಾಡುತ್ತವೆ. ||5||
ಈ ಉದ್ದೇಶದಿಂದಲೇ ಗೌರವಪೂರ್ವಕವಾಗಿ ಪವಿತ್ರತೆಯಿ೦ದ ಸಾಯಿಯ ಈ ಕಥಾಸಂಕಲನವನ್ನು ಬರೆದಿದ್ದೇನೆ. ಇವು ಇಹದಲ್ಲೂ ಪರದಲ್ಲೂ ಆನಂದ ತರುವಂತಹವು. ||6||
ಸಂತರ ಜೀವನ ಧರ್ಮಮಾರ್ಗವನ್ನು ತೋರಿಸುತ್ತದೆ. ಅದು ಯಾವುದೇ ತರ್ಕಬದ್ಧ ಶಾಸ್ತ್ರವೂ ಅಲ್ಲ, ಕಾನೂನು ಸಹ ಅಲ್ಲ. ಸಂತರ ಅನುಗ್ರಹ ಪಡೆಯುವ ಪುಣ್ಯಪಡೆದಲ್ಲಿ ಅವನಿಗೆ ಯಾವುದೂ ಅಪರೂಪದ ಅಚ್ಚರಿಯಲ್ಲ. ||7||
ಆದುದರಿಂದ, ಈ ಆನಂದವನ್ನು ಹಂಚಿಕೊಳ್ಳುವಂತೆ ಶ್ರೋತೃಗಳನ್ನು ಪ್ರಾರ್ಥಿಸುತ್ತೇನೆ. ಯಾರು ಸತ್ಸಂಗದಲ್ಲಿ ನಿರತರೋ, ಯಾರು ಸಂತರ ಜೀವನದ ಕಥೆಗಳನ್ನು ಭಕ್ತಿಯಿಂದ ಓದುತ್ತಿರುವರೋ ಅವರು ಅತ್ಯಂತ ಅನುಗ್ರಹೀತ ಅದೃಷ್ಟವಂತ ವ್ಯಕ್ತಿಗಳು. ||8||
ನನ್ನ ಆತ್ಮೀಯ ಸ್ನೇಹಿತ, ಯಾರ ಜೊತೆಯಲ್ಲಿ ಹಗಲು-ರಾತ್ರಿ ಸಹವಾಸದಲ್ಲಿರುವೆನೋ ಅಂತಹ ದೀರ್ಥಕಾಲದ ಸ್ನೇಹಿತನ
ಜೀವನಚರಿತ್ರೆಯನ್ನೇ ಬರೆಯಲು ಸಾಧ್ಯವಾಗುತ್ತಿಲ್ಲ. ಮತ್ತೆ ಒಬ್ಬ ಸಂತರ ಜೀವನ ಚರಿತ್ರೆಯನ್ನು ಹೇಗೆ ಬರೆಯಲಿ? ||9||
ನನ್ನ ಸ್ವಭಾವವನ್ನೇ ಪೂರ್ಣವಾಗಿ ನಾನು ಅರಿತಿಲ್ಲ. ಮತ್ತೆ ನಾನು ಒಬ್ಬ ಸ೦ತರ ಯೋಚನಾಲಹರಿಯನ್ನು ಚಾಚೂ ತಪ್ಪದೆ ಹೇಗೆ ವಿವರಿಸಲಿ? ||10||
ನಾಲ್ಕು ವೇದಗಳೇ ನಮ್ಮ ಅ೦ತರಾತ್ಮವನ್ನು ವರ್ಣಿಸಲಾಗದೆ ಮೌನವಾಗಿರುವಾಗ ನಾನು ನಿನ್ನ ಆತ್ಮದ ಸತ್ಯಸ್ವರೂಪವನ್ನು ಹೇಗೆ ಅರ್ಥಮಾಡಿಕೊಳ್ಳಲಿ? ||11||
ತಾನೇ ಸಂತನಾಗಬೇಕು. ಮತ್ತೆ ಸ೦ತರ ಸತ್ಯಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಡಬೇಕು. ಆದುದರಿಂದ ಸಂತರ ವಿವರಣೆ ಮಾಡಲು ನನಗಿರುವ ಪರಿಮಿತಿಯನ್ನು ನಾನು ಆಗಲೇ ಅರಿತಿದ್ದೇನೆ. ||12||
ಸಪ್ತಸಾಗರಗಳ ನೀರನ್ನು ಅಳೆಯಬಹುದು. ಆಗಸವನ್ನು ಅಳತೆ ಮಾಡಬಹುದು. ಆದರೆ ಒಬ್ಬ ಸಂತನ ಜೀವನವನ್ನು ಬಿಂಬಿಸುವ ಕನ್ನಡಿಯು ಇಲ್ಲವೇ ಇಲ್ಲ. ||13||
ನಾನೊಬ್ಬ ಪರಿಗಣಿಸಲ್ಪಡದಿರುವ ವ್ಯಕ್ತಿ ಎಂದು ಅರಿತಿರುವೆ. ಆದರೆ ಬಾಬಾರವರ ಅಸಾಧಾರಣ ಶಕ್ತಿಯನ್ನು ಅರಿತಮೇಲೆ ತಡೆಯಲಾರದ ಭಾವನಾತ್ಮಕ ಗೀತಾ ತರಂಗಗಳು ಉಕ್ಕಿ ಬಂದವು. ||14||
ಜಯ! ಜಯ! ಸಾಯಿರಾಯ! ನೀನು ನಿರಾಶ್ರಿತರಿಗೆ, ಅನಾಥರಿಗೆ ಆಶ್ರಿತನು. ನಿನ್ನ ಪ್ರೀತಿ ಅನಂತ ಮತ್ತು ಅವರ್ಣನೀಯ. ನನ್ನ ಮೇಲೆ ಕೃಪೆಮಾಡು, ನಾನು ನಿನ್ನ ದಾಸನು. ||15||
ಈ ರೀತಿ ಸೀಮಿತವಾದ ಬಲ ಸಧ್ಯತೆಗಳಿಂದ ನಾನು ಈ ಕೃತಿ ರಚಿಸುವ ಸಾಹಸಕ್ಕೆ ಕೈಹಾಕಿದ್ದೇನೆ. ನನ್ನನ್ನು ಯಾರೂ ಮೂದಲಿಸದಂತೆ ಮಾಡು. ||16||
ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ - ಯಾರು ಸಂತರ ಜೀವನ ಚರಿತ್ರೆಯನ್ನು ಬರೆಯುತ್ತಾರೋ; ಅವರು ದೇವರಿಂದ ಅನುಗ್ರಹೀತರಾಗಿದ್ದಾರೆ. ಹಾಗಿರುವಾಗ ನನಗೆ ಏಕೆ ಹೆದರಿಕೆ? ||17||
ಇದನ್ನು ಬರೆಯುವ ಸ್ಫೂರ್ತಿಯು ದೇವರಿಂದಲೇ. ನಾನು ದಡ್ಡನೂ, ಮೂರ್ಖನೂ ಆಗಿದ್ದೇನೆ. ತನ್ನ ಕೆಲಸವನ್ನು ಹೇಗೆ ಪೂರ್ಣಗೊಳಿಸಬಹದೆಂದು ಅವನಿಗೇ ತಿಳಿದಿದೆ. ||18||
ಸಂತರಿಗೆ ಯಾವ ರೀತಿಯ ಸೇವೆ ಮಾಡಬೇಕೆಂದು ಭಕ್ತರು ಯೋಚಿಸುತ್ತಾರೋ ಅವುಗಳನ್ನು ಸಂತರು ತಾವೇ ಸ್ವೀಕರಿಸುತ್ತಾರೆ. ಭಕ್ತರು ಕೇವಲ ಅವರ ಕೈಯ ಉಪಕರಣಗಳು. ನಿಜವಾದ ಸ್ಫೂರ್ತಿಗೆ ಸಂತರೇ ಕಾರಣಕರ್ತರು. ||19||
ನಿಜವಾಗಿ ಸಾಯಿಯು ತಾನೇ ಈ ಮೂರ್ಖನಿಂದ ತನ್ನ ಜೀವನ ಚರಿತ್ರೆಯನ್ನು ಬರೆಸುತ್ತಿದ್ದಾನೆ. ಅದರಲ್ಲಿಯೇ ಈ ಗ್ರಂಥದ ಮಹತ್ವವು ಅಡಗಿದೆ. ಅದರಿಂದ ಗೌರವ, ಆದರಗಳು ಹೊರಹೊಮ್ಮುತ್ತವೆ. ||20||
ತಪಸ್ಪಿಗಳು, ಸಂತರು ಅಥವಾ ದೇವರು ತಮ್ಮ ಕಥೆಯನ್ನು ಬರೆಯಲು ಯಾರನ್ನು ಬೇಕಾದರೂ ಆರಿಸಬಹುದು. ಅವರನ್ನು ಅನುಗ್ರಹಿಸಬಹುದು. ||21||
ಶಕೆ 1700ರಲ್ಲಿ ಸಂತರು ಮಹೀಪತಿ ಎಂಬ ವ್ಯಕ್ತಿಗೆ ತಮಗೆ ಸೇವೆಮಾಡಲು ಪ್ರೋತ್ಸಾಹಿಸಿ ತಮ್ಮ ಜೀವನ ಚರಿತ್ರೆಯನ್ನು ಅವನಿಂದ ಬರೆಸಿದರು. ||22||
ಅದೇರೀತಿ, ಹದಿನೆಂಟುನೂರು ಶಕೆಯಲ್ಲಿ ಸಂತರು ದಾಸಗಣು ಎಂಬುವವರ ಸೇವೆಯನ್ನು ಸ್ವೀಕರಿಸಿ ಸಕಲರನ್ನೂ ಪಾವನಗೊಳಿಸುವ ಸಂತರ ಜೀವನ ಚರಿತ್ರೆಯನ್ನು ಬರೆಸಿದರು. ||23||
ಮಹೀಪತಿ ಯವರು ನಾಲ್ಕು ಗ್ರಂಥಗಳನ್ನುರಚಿಸಿದ್ದಾರೆ. 'ಭಕ್ತವಿಜಯ' 'ಸಂತವಿಜಯ', 'ಭಕ್ತಲೀಲಾಮೃತ' ಮತ್ತು 'ಸಂತಲೀಲಾಮೃತ'. ಅದೇ ರೀತಿ ದಾಸಗಣುರವರು ಎರಡು ಅಂತಹ ಗ್ರಂಥಗಳನ್ನು ರಚಿಸಿದ್ದಾರೆ. ||24||
ಆ ಗ್ರಂಥಗಳಲ್ಲಿ ಒಂದು 'ಭಕ್ತಲೀಲಾಮೃತ'. ಮತ್ತೊಂದು 'ಸಂತ ಕಥಾಮೃತ'. ಈ ಎರಡು ಗ್ರಂಥಗಳಲ್ಲಿಯೂ ಆಧುನಿಕ ಕಾಲದ ಭಕ್ತರ ಮತ್ತು ಸಂತರ ಬಗ್ಗೆ ತಿಳಿದಿರುವಷ್ಟು ವಿಷಯಗಳನ್ನು ವಿವರಿಸಲಾಗಿದೆ. ||25||
ಶ್ರೀ ಸಾಯಿ ಕಥಾಮೃತವನ್ನು 'ಭಕ್ತಲೀಲಾಮೃತ' ಗ್ರಂಥದಲ್ಲಿ ಮೂರು ಅಧ್ಯಾಯಗಳಲ್ಲಿ ವಿವರಿಸಿದ್ದಾರೆ. ಓದುಗರು ಅದನ್ನು ಅಲ್ಲಿಂದ ಓದಬೇಕು. ||26||
ಅದೇರೀತಿ, ಸ೦ತ ಕಥಾಮೃತ' ಪುಸ್ತಕದಲ್ಲಿನ 57ನೆಯ ಅಧ್ಯಾಯದಲ್ಲಿ ಸಾಯಿಯವರು ಒಬ್ಬ ಭಕ್ತನಿಗೆ ಹೇಳಿದ ಬೋಧಪ್ರದವಾದ ಕತೆಯೂ ಇರುವುದು. ಅದನ್ನೂ ಸಹ ಓದುಗರು ಓದಬೇಕು. ||27||
ಅದಲ್ಲದೆ, ಸಾಯಿಯ ಲೀಲೆಗಳು ರಘುನಾಥ ಮತ್ತು ಸಾವಿತ್ರಿರವರ ಸ್ವಾನುಭವದಿಂದ ಹೊರಬಂದ 'ಭಜನಮಾಲಾ' ಎಂಬುದರಲ್ಲಿಯೂ ಕಾಣಸಿಗುತ್ತದೆ. ನಿಶ್ಚಯವಾಗಿ ಅವುಗಳು 'ಅಭಂಗ'ಗಳು ಮತ್ತು 'ಪದ'ಗಳು ಹಾಡಲು ಪ್ರೇರೇಷಿಸುತ್ತವೆ. ||28||
'ಭಜನಮಾಲಾ' ಗ್ರಂಥಕ್ಕೆ ಸಾಯಿಯವರ ಮಗು, ಹರಿಸೀತಾರಾಮ ದೀಕ್ಷಿತ್ರವರು ಪ್ರೀತಿಯಿಂದ ಬರೆದ ಮುನ್ನುಡಿಯಲ್ಲಿ ಸಾಯಿಯ ಜೀವನದ ಅಮೃತ ಕಥಾಧಾರೆಯನ್ನು ಹರಿಸಿದ್ದಾರೆ. ಅದು ಬಾಯಾರಿದ ಚಕೋರಪಕ್ಷಿಗೆ ಜಲಧಾರೆ ಸುರಿದಂತಿದೆ. ಶ್ರೋತೃಗಳು ಸಹ ಅವುಗಳನ್ನು ಗೌರವಪೂರ್ವಕವಾಗಿ ಸ್ಟೀಕರಿಸಬೇಕು. ||29||
ದಾಸಗಣುರವರು ರಚಿಸಿದ ವಿವಿಧ ಕವಿತೆಗಳು ಭಾವಪೂರ್ವಕವಾಗಿವೆ. ಬಾಬಾರವರ ಲೀಲೆಗನ್ನು ಓದುತ್ತಿದ್ದರೆ ಶ್ರೋತೃಗಳ ಹೃದಯಕ್ಕೆ ಮಹದಾನಂದವನ್ನುಂಟುಮಾಡುತ್ತದೆ. ||30||
ಅದೇ ರೀತಿ ಗುಜರಾತಿ ಭಕ್ತರಿಗೆ, ಅಮೀದಾಸ ಭವಾನೀದಾಸ ಮೆಹತ ಎಂಬ ಭಕ್ತನು ಬಹಳ ಪ್ರೇಮಪೂರ್ವಕವಾಗಿ ಅನೇಕ ಪವಾಡಗಳ ಕತೆಗಳನ್ನು ಬರೆದಿರುತ್ತಾನೆ. ||31||
ಅದಲ್ಲದೆ, ಕೆಲವು ಅಸೀಮ ಭಕ್ತರು 'ಪುಣೆ' ನಗರದಿಂದ 'ಸಾಯಿಪ್ರಭ' ಎಂಬ ಹೆಸರಿನಿಂದ ಬಾಬಾರವರ ಅನೇಕ ಕತೆಗಳನ್ನು ಪ್ರಕಟಿಸಿರುತ್ತಾರೆ. ||32||
ಅ೦ತಹ ಕತೆಗಳು ಇರುವಾಗ, ಈ ಗ್ರಂಥದ ಅವಶ್ಯಕತೆ ಎಲ್ಲಿತ್ತು? ಈ ರೀತಿಯ ಸಂಶಯ ಶ್ರೋತೃಗಳ ಮನಸ್ಸಿನಲ್ಲಿ ಉಂಟಾಗಬಹುದು. ಆದ್ದರಿಂದ ದಯಮಾಡಿ ಈ ವಿವರಣೆಯನ್ನು ಗಮನವಿಟ್ಟು ಕೇಳಿರಿ. ||33||
ಸಾಯಿಯ ಜೀವನ ಚರಿತ್ರೆಯು ಒಂದು ಮಹಾಸಾಗರವಾಗಿದೆ. ಅದಕ್ಕೆ ಅಂತ್ಯವಿಲ್ಲ. ಅದು ಅನರ್ಫ್ಯ ಮುತ್ತುಗಳಿಂದ ತುಂಬಿದೆ. ನಾನೊಬ್ಬ ಕೇವಲ ಸಣ್ಣ ಹಕ್ಕಿ. ಸಾಗರವನ್ನು ಕುಡಿದು ಹೇಗೆ ಖಾಲಿ ಮಾಡಲಿ? ಅದು ಎಂದಿಗಾದರೂ ಸಾಧ್ಯವೇ? ||34||
ಅದೇ ರೀತಿ, ಸಾಯಿಯ ಜೀವನ ಅಗಾಧವಾಗಿದೆ. ಅದನ್ನು ಪೂರ್ತಿಯಾಗಿ ವಿವರಿಸಲು ಸಾಧ್ಯವಿಲ್ಲ. ಆದ್ದರಿಂದ ನಾನು ಎಷ್ಟು ಸಾಧ್ಯವೋ ಅಷ್ಟು ಮಾಡುವೆ. ದಯಮಾಡಿ ಅದರಿಂದಲೇ ತೃಪ್ತಿಪಡುವುದು. ||35||
ಅಪರಿಮಿತವಾದ, ಅಸಾಮಾನ್ಯವಾದ ಸಾಯಿಯ ಕತೆಗಳು ಈ ಭವಸಾಗರದಲ್ಲಿ ಮುಳುಗಿ ಹೋದವರಿಗೆ ಶಾಂತಿಯನ್ನು ನೀಡುತ್ತದೆ. ಶ್ರೋತೃಗಳು ಅವುಗಳನ್ನು ಕೇಳಿ ಆನ೦ದಭರಿತರಾಗುತ್ತಾರೆ ಮತ್ತು ತನ್ನ ಭಕ್ತರ ಮನಸ್ಸಿಗೆ ಶಾಂತಿಯನ್ನುಂಟುಮಾಡುತ್ತದೆ. ||36||
ಬಾಬಾರವರು ಅನೇಕ ಕತೆಗಳನ್ನು ಹೇಳುತ್ತಿದ್ದರು. ಅವುಗಳಲ್ಲಿ ಜನಸಾಮಾನ್ಯರ ನಿತ್ಯ ಅನುಭವಗಳ ಬಗ್ಗೆ ಪ್ರಾಪಂಚಿಕ ಸಲಹೆ ಹಾಗೂ ಅವರವರ ಕರ್ಮಗಳ ರಹಸ್ಯಗಳನ್ನು ಒಳಗೊಂಡಿರುತ್ತಿದ್ದವು. ||37||
ದೈವಿಕ ಗ್ರಂಥಗಳಾದ ವೇದಗಳು ಎಲ್ಲರಿಗೂ ತಿಳಿದ ವಿಷಯ. ಅವುಗಳಿಂದ ಅನೇಕ ಅಸಾಧಾರಣ ಸಾಹಿತ್ಯಗಳು ಹೊರಬಂದಿವೆ. ಬಾಬಾರವರು ಇಂತಹ ಅನೇಕ ಅರ್ಥಗರ್ಭಿತವಾದ, ಮಧುರವಾದ, ಲೆಕ್ಕವಿಲ್ಲದಷ್ಟು ಕತೆಗಳನ್ನು ಹೇಳುತ್ತಿದ್ದರು. ||38||
ಅವುಗಳನ್ನು ಗಮನವಿಟ್ಟು ಆಲಿಸಿದಾಗ, ಇತರ ಸಂತೋಷಗಳು ತುಚ್ಛವಾಗುತ್ತವೆ. ಹಸಿವೆ, ಬಾಯಾರಿಕೆಗಳು ಮಾಯವಾಗುತ್ತವೆ. ಅಂತರಾಳದಿಂದ ಆಳವಾದ ತೃಪ್ತಿ ಉಂಟಾಗುತ್ತದೆ. ||39||
ಕೆಲವರು ಬ್ರಹ್ಮತ್ತದ ಸಾರದಲ್ಲಿ ಲೀನವಾಗುತ್ತಾರೆ. ಕೆಲವರು ಅಷ್ಟಾಂಗ ಯೋಗದಲ್ಲಿ ಸಿದ್ಧರಾಗುತ್ತಾರೆ. ಕೆಲವರು ಸಮಾಧಿಯ ಪೂರ್ಣತ್ವದಲ್ಲಿ ಒಂದಾಗುತ್ತಾರೆ. ಈ ಅನುಭವಗಳು ಕತೆಗಳನ್ನು ಆಲಿಸಿದಾಗ ಉಂಟಾಗುತ್ತವೆ. ||40||
ಕರ್ಮಬಂಧನವೂ ಪೂರ್ಣವಾಗಿ ಕಳಚಿಕೊಳ್ಳುತ್ತದೆ. ಮನಸ್ಸು ಪ್ರಕಾಶಮಾನವಾಗುತ್ತದೆ ಮತ್ತು
ಬ್ರಹ್ಮಾನಂದವನ್ನು ಎಲ್ಲಾ ಶ್ರೋತೃಗಳೂ ಅನುಭವಿಸಬಹುದು. ||41||
ಆದುದರಿಂದ, ಈ ಅಮೂಲ್ಯವಾದ ಕತೆಗಳ ಮಾಲೆಯನ್ನು ಹೆಣೆಯಲು ಅತ್ಯಂತ ಉತ್ಪಾಹ ಹಾಗೂ ಮಹದಾಸೆ ಉಂಟಾಗಿದೆ. ಇದನ್ನು ಅತ್ಯಂತ ಉತ್ತಮವಾದ ಉಪಾಸನೆ ಎಂದು ನಂಬಿದ್ದೇನೆ. ||42||
ಕಿವಿಗಳ ಮೇಲೆ ಕೆಲವೇ ಪದಗಳು ಬಿದ್ದಲ್ಲಿ ಆಜೀವಪರ್ಯಂತದ ದುರಾದ್ಯಷ್ಟಗಳು ಮಾಯವಾಗುತ್ತವೆ. ಈ ಪೂರ್ಣ ಕತೆಯನ್ನು ಆದರದಿಂದ ಶ್ರದ್ಧಾಪೂರ್ವಕವಾಗಿ ಕೇಳಿದಲ್ಲಿ ಈ ಭವಸಾಗರವನ್ನು ದಾಟಬಹುದು. ||43||
ಅವನು ನನ್ನ ಕೈಯನ್ನು ಹಿಡಿದು ಲೇಖನಿಯನ್ನಾಗಿ ಮಾಡುತ್ತಾನೆ, ಮತ್ತು ಬರೆಸುತ್ತಾನೆ. ನಾನು ಹೆಸರಿಗಷ್ಟೇ ಅದರ ಕತೃ. ಅವನ ಬರವಣಿಗೆಗೆ ನಾನು ಕೇವಲ ನಿಮಿತ್ತಮಾತ್ರ. ||44||
ಬಾಬಾರವರ ಲೀಲೆಗಳನ್ನು ಅವಲೋಕಿಸುತ್ತ, ವರ್ಷಗಳಮೇಲೆ ವರ್ಷಗಳು ಕಳೆದಂತೆ ಬಾಬಾರವರ ಕತೆಗಳನ್ನು ಅವರ ಪ್ರೀತಿಯ ಸರಳ ಭಕ್ತರಿಗಾಗಿ ಸಂಗ್ರಹಿಸುವುದೇ ಒಂದು ಕೆಲಸವಾಯಿತು. ||45||
ಬಾಬಾರವರ ದರ್ಶನದಿಂದ ಯಾರ ಕಣ್ಣುಗಳಿಗೆ ತೃಪ್ತಿ ಉಂಟಾಗುವುದಿಲ್ಲವೋ, ಅವರಿಗೆ ಬಾಬಾರವರ ಕತೆಗಳ ಶ್ರವಣವು ಪುಣ್ಯಕರವೂ, ಪರಿಶುದ್ಧತೆಯನ್ನು ನೀಡುವಂತಹದೂ ಆಗಿದೆ. ||46||
ಈ ಗ್ರಂಥವನ್ನು ಓದಲು ಇಚ್ಛಿಸುವ ಪುಣ್ಯವಂತರು ಸದಾ ಸಂತೋಷ, ಆನಂದ ಮತ್ತು ತೃಪ್ತಿಯಿಂದ ಕೂಡಿರುತ್ತಾರೆ. ||47||
ಈ ಯೋಚನೆಗಳು ನನ್ನ ಮನದಲ್ಲಿ ಮೂಡಿದಾಗ ನಾನು ಮಾಧವ ರಾವ್ ಅವರಿಗೆ ಇದರ ಬಗ್ಗೆ ತಿಳಿಸಿದೆ. ಆದರೆ ಅವುಗಳನ್ನು ನಾನು ಹೇಗೆ ಸಾಧಿಸಬಲ್ಲೆ ಎಂಬುದರ ಬಗ್ಗೆ ಸಂಶಯ ಹುಟ್ಟಿತು. ||48||
ನನಗೆ 60 ವರ್ಷಗಳು ಕಳೆದಿವೆ. ಬುದ್ಧಿಯು ಅರಳು-ಮರಳು ಆಗಿದೆ ಮತ್ತು ದೈಹಿಕ ಕುಂದಿನಿಂದಲೂ ನನ್ನ ಪ್ರಯತ್ನಗಳು ಮುದುಕನ ಪ್ರಯತ್ನಗಳಂತೆ ಅ೦ತ್ಯಗೊಳ್ಳಬಹುದು. ||49||
ಸಾಯಿಯ ಪ್ರೀತಿಗಾಗಿ ನನ್ನ ಪ್ರಯತ್ನಗಳೆಲ್ಲ ಇರಲಿ, ನನಗೆ ಇದನ್ನು ಅನುಭವಿಸಲು ಸಾಧ್ಯವಾಗಬಹುದು. ಇಲ್ಲದಿದ್ದಲ್ಲಿ ಇವೆಲ್ಲ ಅಪ್ರಯೋಜಕ. ಆದ್ದರಿಂದಲೇ ಈ ಪ್ರಯತ್ನ. ||50||
ಹಗಲು ಇರುಳು ದಿವ್ಯ ಅನುಭವಗಳನ್ನು ಅನುಭವಿಸಿದ ನಾನು ಇದರ ಬಗ್ಗೆ ಮಾಹಿತಿಯನ್ನು ಬರೆಯಲು ನಿರ್ಧರಿಸಿದೆ. ಅದರ ಅಧ್ಯಯನದಿಂದ ಮನಸ್ಸು ಶಾಂತಿ ಮತ್ತು ವಿಶ್ರಾಂತಿಯನ್ನು ಪಡೆಯುತ್ತದೆ. ||51||
ಸ್ವಯಂ ವೇದ್ಯವಾದ ಮತ್ತು ಸ್ವಸ್ವರೂಪ ಸ್ಥಿತಿಯ ಆಧಾರದ ಮೇಲೆ ಹೊರಬಂದ ಸಾಯಿಯ ವಚನಗಳನ್ನು ಯಾವುದೇ ಬದಲಾವಣೆಗಳಿಲ್ಲದೆ ಶ್ರೋತೃಗಳ ಮುಂದಿಡಲು ಯೋಚಿದೆನು. ||52||
ಬಾಬಾರವರು ಅನೇಕ ಉಪಮೆಗಳನ್ನು ತಿಳಿಸಿ ಭಕ್ತಿಮಾರ್ಗದಲ್ಲಿ ಅನೇಕರನ್ನು ಕರೆದೊಯ್ದಿದ್ದಾರೆ. ಎಲ್ಲವನ್ನೂ ಸಂಗ್ರಹಿಸಿದಲ್ಲಿ ಅದು ಸಾಯಿ ಧರ್ಮದ ಕೃತಿಯಾಗುತ್ತದೆ. ||53||
ಯಾರು ಈ ಕತೆಗಳನ್ನು ಹೇಳುತ್ತಾರೋ, ಯಾರು ಇವುಗಳನ್ನು ಗೌರವದಿಂದ ಕೇಳುತ್ತಾರೋ ಇಬ್ಬರೂ ಶಾಶ್ವತವಾದ ಸುಖ ಮತ್ತು ಶಾಂತಿಗಳನ್ನು ಪಡೆಯುತ್ತಾರೆ. ||54||
ಬಾಬಾರವರು ಹೇಳಿದ ಕತೆಗಳನ್ನು ಕೇಳುತ್ತಲೇ ತಮ್ಮ ದೇಹದ ವ್ಯಾಧಿಗಳನ್ನೆಲ್ಲ ಮರೆಯುತ್ತಾರೆ. ಅವುಗಳನ್ನು ಶ್ರದ್ಧೆಯಿಂದ ಮನನ ಮಾಡಿದಲ್ಲಿ ಸ್ವಾಭಾವಿಕವಾಗಿಯೇ ಬಂಧನಗಳಿಂದ ಮುಕ್ತರಾಗುತ್ತಾರೆ. ||55||
ಸಾಯಿಯವರ ಬಾಯಿಯಿಂದಲೇ ಕೇಳಿದ ಕತೆಗಳು ಅಮೃತಕ್ಕಿಂತಲೂ ಮಧುರವಾಗಿವೆ. ಅವುಗಳನ್ನು ಕೇಳಿ ಶ್ರೋತೃಗಳು ಪರಮಾನಂದದಿಂದ ಕುಣಿಯಲಿದ್ದಾರೆ. ಅವುಗಳ ಮಾಧುರ್ಯವನ್ನು ಹೇಗೆ ವರ್ಣಿಸಲಿ? ||56||
ಆ ಕತೆಗಳನ್ನು ಯಾವುದೇ ಉದ್ದೇಶವಿಲ್ಲದೆಯೇ ಗುಣಗಾನಮಾಡುತ್ತಾರೋ, ಹಾಡುತ್ತಾರೋ ಅಂಥಹವರ ಚರಣಧೂಳಿಯಲ್ಲಿ ಹೊರಳಾಡಿದರೆ ಮೋಕ್ಷವನ್ನು ಪಡೆಯಲು ನನಗೆ ಸಾಧ್ಯವಾಗುತ್ತದೆ ಎಂಬುದು ನನ್ನ ಅನಿಸಿಕೆ. ||57||
ಆ ಕತೆಗಳ ವಿಶೇಷ ನಿರೂಪಣೆಯಲ್ಲಿ ನಿಶ್ಚಿತವಾದ ಪದಗಳ ಜೋಡಣೆಯು ಶ್ರೋತೃಗಳನ್ನು ಪೂರ್ಣವಾಗಿ ಅವನಲ್ಲಿ ಲೀನವಾಗಿಸಿ ಪೂರ್ಣಾನಂದದ ಅನುಭವನ್ನು ದಯಪಾಲಿಸುತ್ತದೆ. ||58||
ಆ ಕತೆಗಳನ್ನು ಆಲಿಸಲು ಕಿವಿಗಳು ಕಾತರಗೊಳ್ಳುವ ರೀತಿಯಲ್ಲಿ ಅಥವಾ ಕಣ್ಣುಗಳು ದರ್ಶನಕ್ಕಾಗಿ ಹಾತೊರೆಯುವ ರೀತಿಯಲ್ಲಿ ಮನಸ್ಸು ಸಹ ಏಕಾಗ್ರತೆಗಾಗಿ ಕಾತರಗೊಳ್ಳುತ್ತದೆ ಮತ್ತು ಸುಲಭವಾಗಿ ದಿವ್ಯಾನಂದದ ಸಾಗರದಲ್ಲಿ ಮುಳುಗುತ್ತದೆ. ||59||
ಗುರುಮಾತೆಯು ನನ್ನ ತಾಯಿ, ಮತ್ತು ಆಕೆಯ ಬಗೆಗಿನ ಕತೆಗಳನ್ನು ಬಾಯಿಯಿಂದ ಬಾಯಿಗೆ ಕೇಳಿದಲ್ಲಿ ಅವುಗಳನ್ನು ಹೃದಯದಲ್ಲಿ ಆದರದಿಂದ ಪೋಷಿಸಬೇಕು. ||60||
ಅದೇ ಕತೆಯನ್ನು ಮತ್ತೆ ಮತ್ತೆ ಮರುಕಳಿಸಿ ನಮಗೆ ಸಾಧ್ಯವಾದಷ್ಟು ಅರಗಿಸಿಕೊಂಡು ಅವುಗಳನ್ನು ಪ್ರೀತಿಯೆಂಬ ಬಂಧನದಿಂದ ಬಂಧಿಸಿ ನಂತರ ನಮ್ಮನಮ್ಮಲ್ಲಿ ಹಂಚುತ್ತೇವೆ. ||61||
ಈ ಗ್ರಂಥದಲ್ಲಿ ನಾನು ಸ್ವಂತದ್ದಾಗಿ ಏನನ್ನೂ ಬರೆದಿಲ್ಲ. ಇದೆಲ್ಲವೂ ಸಾಯಿನಾಥನಿಪ್ರೇರಣೆಯೇ. ನಾನು ಏನನ್ನು ಹೇಳಬೇಕೆಂದು ಅವನು ಇಚ್ಛಿಸುತ್ತಾನೋ, ಅದನ್ನೇ ನಾನು ತಿಳಿಸುವಂತೆ ಮಾಡುತ್ತಾನೆ. ||62||
'ನಾನು ಹೇಳುತ್ತೇನೆ' ಎಂಬುದನ್ನು ಮರೆತಿದ್ದೇನೆ. ಸಾಯಿ ತಾನೇ ಸರಪಳಿಗಳಿಂದ ನನ್ನನ್ನು ಆಡಿಸುತ್ತಿದ್ದಾನೆ. ಅವನೇ ನನ್ನ ಮೂಲಕ ಮಾತನಾಡಿಸುತ್ತಿದ್ದಾನೆ. ಇನ್ನು 'ನಾನು ಹೇಳುತ್ತಿದ್ದೇನೆ' ಎಂದು ಹೇಳಲು ನಾನು ಯಾರು? ||63||
ಯಾರು 'ಅಹಂ'ಭಾವವನ್ನು ಅವನ ಚರಣಗಳಲ್ಲಿ ಸಂಪೂರ್ಣವಾಗಿ ಅರ್ಪಿಸಿದ್ದಾರೋ ಅವರಿಗೆ ಪರಮಾನಂದವು ದೊರೆಯುತ್ತದೆ. 'ಅಹಂ'ಭಾವ ನಾಶವಾದಕೂಡಲೇ ಪ್ರಾಪಂಚಿಕ ಜೀವನವೆಲ್ಲವೂ ಆನಂದಮಯವಾಗುತ್ತದೆ. ||64||
ನನಗೆ ಯೋಚನೆಗಳು ಮೂಡಿಬಂದಾಗ, ಬಾಬಾರವರನ್ನು ಕೇಳುವ ಅವಕಾಶವೂ ಇರಲಿಲ್ಲ, ಕೇಳುವ ಧೈರ್ಯವೂ ಬರಲಿಲ್ಲ. ಮಸೀದಿಯ ಮೆಟ್ಟಲು ಹತ್ತಿ ಬಂದ ಮಾಧವರಾವ್ ಹತ್ತಿರ ಅದನ್ನು ಹೇಳಿದೆ. ||65||
ಅದೇ ಸಮಯದಲ್ಲಿ ಸುತ್ತಮುತ್ತಲು ಯಾರೂ ಇಲ್ಲದ್ದನ್ನು ನೋಡಿಕೊಂಡು ಮಾಧವರಾವ್ ಬಾಬಾರವರನ್ನು ಕೇಳುವ ಅವಕಾಶ ಪಡೆದನು. ||66|| "ಬಾಬಾ, ಅಣ್ಣಾ ಸಾಹೇಬನಿಗೆ ನಿಮ್ಮ ಜೀವನ ಚರಿತ್ರೆಯನ್ನು ಬರೆಯುವ ಮನಸ್ಸಾಗಿದೆ, ನೀವು ಒಪ್ಪಿಗೆ ನೀಡಿದಲ್ಲಿ ತನಗೆ ಸಾಧ್ಯವಾದಷ್ಟು ಬರೆಯುವುದಾಗಿ ಹೇಳುತ್ತಿದ್ದಾನೆ". ||67||
"ನಾನೊಬ್ಬ ಫಕೀರ. ಬಾಗಿಲಿಂದ ಬಾಗಿಲಿಗೆ ಭಿಕ್ಷೆ ಬೇಡುತ್ತ ಅಲೆದಾಡುವವನು. ಭಾಕ್ರಿ(ರೊಟ್ಟಿ)ಯನ್ನು ತರಕಾರಿ ಇದ್ದೋ ಇಲ್ಲದೆಯೋ ತಿನ್ನುತ್ತ ದಿನಗಳೆಯುವವನು. ಹಾಗಿರುವ ನನ್ನ ಜೀವನಚರಿತ್ರೆ ಏಕೆ"? ||68||
"ಅದು ಅಸಂಬದ್ಧವಾಗುತ್ತದೆ". "ಈ ರೀತಿ ಈ ರತ್ನದ ಬಗ್ಗೆ ಹೇಳಬೇಡಿ. ಅದನ್ನು ಅಸಾಮಾನ್ಯವಾದ ಆಭರಣವನ್ನಾಗಿ ಮಾಡಬೇಕು. ||69||
"ಅದು ಹೇಗಾದರೂ ಆಗಲಿ. ನಿಮ್ಮ ಅನುಮತಿ ಮಾತ್ರ ಬಹಳ ಮುಖ್ಯವಾದುದು. ತಾವು ಸಹಕಾರ ನೀಡಿದಲ್ಲಿ ಅವನು ಬರೆಯುತ್ತಾನೆ. ಅಥವಾ ನಿಮ್ಮ ಅನುಗ್ರಹವು ಅವನ ಮೂಲಕ ಬರೆಸುತ್ತದೆ, ಮತ್ತು ಎಲ್ಲ ದುಷ್ಟಶಕ್ತಿಗಳನ್ನೂ ನಿವಾರಿಸುತ್ತದೆ". ||70||
"ಸಂತರ ಆಶೀರ್ವಾದಗಳಿಂದ ಮಾತ್ರ ಗಂಥ ರಚನೆಯನ್ನು ಪ್ರಾರಂಭಿಸಬಹುದು. ನಿಮ್ಮ ಅನುಗ್ರಹವಿಲ್ಲದೆ ಬರವಣಿಗೆಯು ಸುಲಲಿತವಾಗಿ ಸಾಗುವುದಿಲ್ಲ". ||71||
ನನ್ನ ಅಂತರಂಗದ ಅಭಿಲಾಷೆಯನ್ನು ಅರಿತು ಸಾಯಿಸಮರ್ಥರಲ್ಲಿ ಕರುಣೆ ಉಕ್ಕಿಬಂದಿತು ಮತ್ತು ಹೇಳಿದರು, “ಅವನ ಆಸೆ ನೆರವೇರುತ್ತದೆ". ನಾನು ನನ್ನ ಮಸ್ತಕವನ್ನು ಅವರ ಚರಣಗಳಲ್ಲಿ ಇಟ್ಟೆನು. ||72||
ಸಾಯಿಯು ಈ ಎಲ್ಲಾ ವಿಧಿಗಳ ಉಪಾಸನೆ ಹಾಗೂ ದೈವಶ್ರದ್ಧೆಗಳಲ್ಲಿ ಪರಿಣತರು ಮತ್ತು ಎಲ್ಲಾ ಭಕ್ತರ ರಕ್ಷಕರೂ ಹೌದು. ಅವರು ನನಗೆ 'ಉದಿಯ' ಪ್ರಸಾದವನ್ನು ಕೊಟ್ಟು ವರಪ್ರದಾಯಕ ಹಸ್ತವನ್ನು ನನ್ನ ತಲೆಯಮೇಲೆ ಇಟ್ಟರು. ||73||
ಮಾಧವರಾವ್ನ ಪ್ರಾರ್ಥನೆಯನ್ನು ಆಲಿಸಿದ ಮೇಲೆ ಸಾಯಿಯು ನನ್ನ ಮೇಲೆ ದಯೆತೋರಿ ನನ್ನ ಚಂಚಲವಾದ ಮನಸ್ಸನ್ನು ಪರಿಶುದ್ಧಗೊಳಿಸಿ ನನ್ನಲ್ಲಿ ಧೈರ್ಯವನ್ನು ತುಂಬಿದರು. ||74||
ನನ್ನ ಆಸೆಯನ್ನು ಅರಿತನ೦ತರ ನನಗೆ ಮುಂದುವರೆಯಲು ಅನುವತಿ ನೀಡುತ್ತ ಹೇಳಿದರು - "ಒಳ್ಳೆಯ ಕತೆಗಳನ್ನು, ಘಟನೆಗಳನ್ನು ಮತ್ತು ಅನುಭವಗಳನ್ನು ಸಂಗ್ರಹಿಸು". ||75||
"ಎಲ್ಲವನ್ನೂ ದಾಖಲಿಸಿದರೆ ಒಳ್ಳೆಯದು. ನನ್ನ ಮನಃಪೂರ್ವಕ ಪ್ರೋತ್ಸಾಹ ಇದೆ. ಲೇಖಕ ಕೇವಲ ನಿಮಿತ್ತ ಮಾತ್ರ ನಾನೇ ಸ್ವತಃ ಬರೆಯುತ್ತೇನೆ". ||76||
"ನನ್ನ ಕತೆಯನ್ನು ನಾನೇ ಸ್ವತಃ ಬರೆಯುವೆ. ಭಕ್ತರ ಇಚ್ಛೆ ಗಳನ್ನು ಪೂರೈಸಬೇಕಾಗುತ್ತದೆ. ಅದರಿಂದ ನಿನ್ನ 'ಅಹಂ'ಭಾವವನ್ನು ಅಳಿಸಿ ನನ್ನ ಚರಣಗಳಲ್ಲಿ ಹಾಕಿಕೊಳ್ಳುತ್ತೀನೆ". ||77||
"ತನ್ನ ಜೀವನದಲ್ಲಿ ಈ ರೀತಿ ಜೀವಿಸುವವನಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಅವನು ಜೀವನ ಚರಿತ್ರೆಯನ್ನು ರಚಿಸುವುದಷ್ಟಕ್ಕೇ ಅಲ್ಲ ಅವನ ಮನೆಯಲ್ಲಿ ವಾಸಮಾಡಿ ಅವನ ಸೇವೆ ಮಾಡುತ್ತೇನೆ". ||78||
"'ಅಹಂ'ಭಾವವು ಕಡಿಮೆಯಾಗಿ, ಕೊನೆಯಲ್ಲಿ ಪೂರ್ಣವಾಗಿ ನಾಶವಾದಾಗ, ನಾನು ಅವನಲ್ಲಿ ನೆಲಸುತ್ತೇನೆ ಮತ್ತು ನಾನೇ ಸ್ಪತಃ ಕೈಗಳಿಂದ ಬರೆಯುತ್ತೇನೆ". ||79||
ಈ ಪ್ರಮಾಣ ವಚನವು ಈ ದೃಢತೆಯಿಂದ ಪ್ರಾರಂಭವಾಯಿತು. ಯಾವುದೇ ಆಲೋಚನೆಯು, ಬರವಣಿಗೆಯು, ಅವನಿಂದಲೇ ರಚಿಸಲ್ಪಟ್ಟಿತು. ಲೇಖಕರು ಕೇವಲ ನಿಮಿತ್ತಮಾತ್ರ. ||80||
"ನೀನು ಮನೆಯಲ್ಲಿರು ಅಥವಾ ಹೊರಗಿರು, ದಾಖಲೆಗಳನ್ನು ಮಾತ್ರ ಖಂಡಿತವಾಗಿ ಇಟ್ಟುಕೊ. ಆಗಾಗ್ಗೆ ಅವುಗಳನ್ನು ನೆನಪಿಸಿಕೊ. ನಿನಗೆ ಶಾಂತಿ ದೊರೆಯುತ್ತದೆ". ||81||
"ನೀನು ನನ್ನ ಕತೆಗಳನ್ನು ಕೇಳಿದಾಗ, ಹೇಳಿದಾಗ ಮತ್ತು ಅವುಗಳ ಬಗ್ಗೆ ಮನನ ಮಾಡಿದಾಗಲೂ ನನ್ನ ಬಗ್ಗೆ ಭಕ್ತಿ ಹುಟ್ಟಿ ಅಜ್ಞಾನವು ಪೂರ್ಣವಾಗಿ ನಾಶವಾಗುತ್ತದೆ". ||82||
"ಭಕ್ತಿ ಇದ್ದಲ್ಲಿ ತ್ರದ್ಧೆ ಉಂಟಾಗುತ್ತದೆ. ಆಗ ನಾನು ಸದಾ ಶಕ್ತಿವಂತನಾಗಿ ಇರುತ್ತೇನೆ. ಅದರ ಬಗ್ಗೆ ಸಂಶಯ ಬೇಡ. ನನ್ನನ್ನು ಪಡೆಯಲು ಅಸಾಧ್ಯವಾಗಿರುತ್ತದೆ". ||83||
"ಈ ಕತೆಯನ್ನು ಮನಸ್ಸಿಟ್ಟು ಕೇಳಿದ ಶ್ರೋತೃಗಳಲ್ಲಿ ಅಸೀಮ ಶ್ರದ್ಧೆಯು ಜಾಗೃತವಾಗುತ್ತದೆ. ಮತ್ತು ಅವರು ಅತಿ ಸುಲಭವಾಗಿ ಬ್ರಹ್ಮಾನಂದವನ್ನು ಅನುಭವಿಸುತ್ತಾರೆ. ಮತ್ತು ಶಾಶ್ವತ ಆನಂದದ ಸ್ಥಿತಿಯನ್ನು ಪಡೆಯುತ್ತಾರೆ". ||84||
"ಭಕ್ತರು ನಿಶ್ಚಯವಾಗಿ ಆತ್ಮಸಾಕ್ಷಾತ್ಯಾರವನ್ನು ಪಡೆಯುತ್ತಾರೆ. ಆತ್ಮವು ಬ್ರಹ್ಮತ್ವದಲ್ಲಿ ಒಂದಾಗಿರುತ್ತದೆ. ನಿರ್ಗುಣ, ನಿರಾಕಾರ ಪರಬ್ರಹ್ಮನನ್ನು ಅರಿತು ಜೀವಾತ್ಮ, ಬ್ರಹ್ಮತ್ತದಲ್ಲಿ ಐಕ್ಯವಾಗುತ್ತದೆ. ||85||
"ಇದೇ ನನ್ನ ಕತೆಗಳ ಉದ್ದೇಶ. ಮತ್ತೇನನ್ನು ಅಚ್ಛಿಸಬಹುದು? ಇದು ವೇದಗಳ ಗುರಿಯೂ ಆಗಿದೆ. ಇದರಿಂದಾಗಿ ಭಕ್ತರು ಜ್ಞಾನಸಂಪನ್ನರಾಗುತ್ತಾರೆ. ||86||
ವಾದ-ವಿವಾದಗಳ ಬುದ್ಧಿ ಇರುವಲ್ಲಿ ಅವಿದ್ಯೆ ಮತ್ತು ಮಾಯೆ ಸಮೃದ್ಧಿಯಾಗಿರುತ್ತದೆ. ಸ್ವಹಿತದೃಷ್ಟಿ-ಸ್ಟಾರ್ಥ ಇರುತ್ತವೆ. ಸದಾ ಕುತರ್ಕಿಗಳೂ ದುರ್ಬುದ್ಧಿಯುಳ್ಳವರೂ ಆಗಿರುತ್ತಾರೆ. ||87||
"ಅ೦ತಹ ವ್ಯಕ್ತಿಯು ಆತ್ಮಜ್ಞಾನಕ್ಕೆ ಅರ್ಹನಲ್ಲ, ಅಜ್ಞಾನವು ಅವನನ್ನು ತನ್ನ ಹಿಡಿತದಲ್ಲಿಟ್ಟರುತ್ತದೆ. ಅವನಿಗೆ ಈ ಜಗತ್ತಿನಲ್ಲಾಗಲೀ ಇನ್ನು ಮುಂದಾಗಲೀ ಮತ್ತೇನೂ ಇರುವುದಿಲ್ಲ. ಅವನಿಗೆ ಎಂದೆಂದಿಗೂ, ಎಲ್ಲೆಲ್ಲೂ ದುಃಖವೇತುಂಬಿರುತ್ತದೆ. ||88||
"ಪ್ರತಿವ್ಯಕ್ಷಿಯೂ ಅವನದೇ ಆದ ಯೋಚನಾ ಲಹರಿಯನ್ನು ಪರಿಗಣಿಸಿದರೆ ಪ್ರಯೋಜನವಿಲ್ಲ. ಮತ್ತೆ ಇನ್ನೊಬ್ಬರ ಆಲೋಚನೆಗಳನ್ನು ತಿರಸ್ಕರಿಸುವ ಕಾರಣವೂ ಇಲ್ಲ. ಮತ್ತೊಬ್ಬರದು ತಪ್ಪೆಂದು ಚರ್ಚೆಮಾಡಿ ಸಾಧಿಸುವ ಕಾರಣವೂ ಇಲ್ಲ. ಇವುಗಳೆಲ್ಲವೂ ಆಧಾರ ರಹಿತ ಪ್ರಯತ್ನಗಳು. ||89||
"ಮತ್ತೊಬ್ಬರ ಆಲೋಚನೆಗಳನ್ನು ತಿರಸ್ಕರಿಸುವ ಅವಶ್ಯಕತೆಯೂ ಇಲ್ಲ". ಈ ವಾಕ್ಯವು ನಾನು ಶ್ರೋತೃಗಳಿಗೆ ನೀಡಿದ ಪ್ರಮಾಣವಚನವನ್ನು ನೆನಪಿಸಿಕೊಡುತ್ತದೆ. ||90||
ಈ ಒಂದನೆಯ ಅಧ್ಯಾಯವನ್ನು ಮುಗಿಸುವ ಮೊದಲು ನಾನು ನನ್ನ ಹೆಸರು 'ಹೇಮಾದ' ಎಂದು ಹೇಗಾಯಿತು ಎಂಬ ಚರಿತ್ರೆಯನ್ನು ತಿಳಿಸುತ್ತೇನೆಂದು ನಾನು ನನ್ನ ಶ್ರೋತೃಗಳಿಗೆ ವಚನ ನೀಡಿರುತ್ತೇನೆ. ಮೊದಲು ಅದನ್ನು ನಾನು ಹೇಳುವೆನು. ||91||
ಇದು ಮುಖ್ಯ ಕತೆಯಿಂದ ವಿಷಯಾಂತರ ಆದರೂ ತಾವು ಅದನ್ನು ಕೇಳಿದಾಗ ಅದರ ಯುಕ್ತಾಯುಕ್ತತೆಯನ್ನು ಅರಿಯುತ್ತೀರಿ. ನಿಮ್ಮ ಜಿಜ್ಞಾಸೆಯು ತೃಪ್ತಿಯಾಗುತ್ತದೆ. ಇದೂ ಸಹ ಸಾಯಿ ಪ್ರೇರಣೆಯೇ ಆಗಿದೆ. ||92||
ಅನ೦ತರ ನಾನು ಸಾಯಿಯ ಜೀವನ ಚರಿತ್ರೆಯತ್ತ ಬರುತ್ತೇನೆ. ಆದುದರಿಂದ ಶ್ರೋತೃಗಳು ಅತ್ಯಂತ ಗಮನವಿಟ್ಟು ಕೇಳಬೇಕು. ||93||
ಸಾಯಿಲೀಲೆಗಳ ಈ ಗ್ರಂಥದಲ್ಲಿ, ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಒಂದು ಸಾಲು ಇದೆ. "ಭಕ್ತನಾದ ಹೇಮಾದಪಂತನಿಂದ ರಚಿಸಲ್ಪಟ್ಟಿದೆ" ಎಂದು. ಈ ಪಂತ ಯಾರು ||94||
ಇದು ಶ್ರೋತೃಗಳ ಮನಸ್ಸಿನಲ್ಲಿ ಸ್ವಾಭಾವಿಕವಾಗಿ ಏಳುವ ಪ್ರಶ್ನೆ. ಅವರ ಕುತೂಹಲವನ್ನು ತೃಪ್ತಿಪಡಿಸಲು, ನನಗೆ ಈ ಹೆಸರು ಹೇಗೆ ಬಂದಿತು ಎಂಬುದನ್ನು ವಿಶ್ವಾಸಪೂರ್ವಕವಾಗಿ ಆಲಿಸಬೇಕು. ||95||
ಹಿಂದೂ ಧರ್ಮಶಾಸ್ತ್ರಗಳ ಅನುಸಾರ ಹುಟ್ಟಿನಿಂದ ಸಾವಿನ ವರೆಗೆ ಹದಿನಾರು ಅತಿಮುಖ್ಯವಾದ ಕರ್ಮಗಳನ್ನು ಗೊತ್ತುಪಡಿಸಲಾಗಿದೆ. ಅದರಲ್ಲಿ ಒಂದು ನಾಮಕರಣ ಮತ್ತು ಇದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ||96||
ಈ ಸಂದರ್ಭದಲ್ಲಿ ಒಂದು ಸಣ್ಣ ಕತೆ ಹೇಳುತ್ತೇನೆ. - ಶ್ರೋತೃಗಳು ಗಮನವಿಟ್ಟು ಕೇಳಿರಿ. 'ಹೇಮಾದಪಂತ' ಎಂದು ನಾಮಕರಣವಾದ ಸನ್ನಿವೇಶದ ಬಗ್ಗೆ ಹೇಳುತ್ತೇನೆ. ||97||
ಈ ರಚನಕಾರನು ಯಾವಾಗಲೂ ತು೦ಟನಾಗಿ, ಸೋಮಾರಿಯಾಗಿ, ಅವಿದ್ಯಾವಂತನಾಗಿಯೂ ಇದ್ದನು. ||98||
ಈತನು ಸದ್ಗುರುವಿನ ಶಕ್ತಿಯನ್ನು ಅರಿಯದೆ, ದುರ್ಗುಣವಂತನೂ, ಮೂರ್ಖಶಿಖಾಮಣಿಯೂ, ತಾನು ಬುದ್ಧಿವ೦ತನೆಂಬ ಅಹಂಕಾರಿ. ವಾಗ್ಯುದ್ಧಕ್ಕೆ ತಯಾರಾಗಿದ್ದವನು. ||99||
ಆದರೆ ವಿಧಿಬರಹದಂತೆ ಸಾಯಿಯ ಚರಣಕಮಲಗಳನ್ನು ಸೇರಲು ಸಾಧ್ಯವಾಯಿತು. ನನ್ನ ಭಾಗ್ಯ ಮಾತ್ರದಿಂದಲೇ ಸಾಯಿಚರಣಗಳ ದರ್ಶನ ಲಾಭವಾಯಿತು, ಸಂಶಯವಿಲ್ಲ. ||100||
ನನ್ನ ಪೂರ್ವ ಜನ್ಮದ ಪುಣ್ಯಫಲದಿಂದ ಕಾಕಾಸಾಹೇಬ್ ಮತ್ತು ನಾನಾಸಾಹೇಬ್ ಚಂದೋರಕರ್ರಂತಹ ಅಂತರಂಗದ ಭಕ್ತರ ಸಹವಾಸ ದೊರಕದಿದ್ದರೆ ನಾನು ಶಿರಡಿ ತಲುಪಲು ಹೇಗೆ ಸಾಧ್ಯವಾಗುತ್ತಿತ್ತು? ||101||
ಕಾಕಾಸಾಹೇಬ್ರವರ ಒತ್ತಡಕ್ಕೆ ಮಣಿದು ಶಿರಡಿಗೆ ಹೋಗಲು ನಿರ್ಧರಿಸಿದೆ. ಆದರೆ ಹೊರಡುವ ದಿನವೇ ಅನಿರೀಕ್ಷಿತವಾಗಿ ನನ್ನ ಮನಸ್ಸು ಬದಲಾಯಿತು. ||102||
ನನ್ನ ಆಪ್ತಮಿತ್ರರಲ್ಲಿ ಒಬ್ಬನು ಗುರುವಿನ ಕೃಪೆಗೆ ಪಾತ್ರನಾಗಿ ಒಬ್ಬ ಪುತ್ರನನ್ನು ಪಡೆದವನು, ತನ್ನ ಪತ್ನಿಯೊಡನೆ ಲೋನಾವಳದಲ್ಲಿದ್ದನು. ಆಗ ಒಂದು ಅನಿರೀಕ್ಷಿತವಾದ ಘಟನೆ ನಡೆಯಿತು. ||103||
ಅಲ್ಲಿ ಉತ್ತಮ ಹವಾಮಾನ ಸಹ ಇತ್ತು. ಅವನ ಒಬ್ಬನೇ ಪುತ್ರ ಆರೋಗ್ಯವಂತ ಮತ್ತು ಗುಣವಂತನಾದವನು ವಿಪರೀತ ಜ್ವರದಿಂದ ಬಳಲಿದನು. ||104||
ಅವನು ಮನುಷ್ಯಪ್ರಯತ್ನಗಳನ್ನೆಲ್ಲ ಮಾಡಿದನು. ಅನೇಕ ಯಂತ್ರ-ತಂತ್ರ ವಿಧಿಗಳು ನಡೆದಿದ್ದವು. ಗುರುವನ್ನು ಹುಡುಗನ ಹತ್ತಿರ ಕರೆದುಕೊ೦ಡು ಬಂದರು. ಆದರೂ ಅವನ ಮಗ ದೈವಾಧೀನನಾದನು. ||105||
ಈ ರೀತಿ ಕ್ಲಿಷ್ಟಪರಿಸ್ಥಿತಿಯನ್ನು ತೀರ್ಮಾನಿಸಿ ಮಾರಣಾಂತಿಕ ಕಷ್ಟಗಳನ್ನು ದೂರಮಾಡಲು ಗುರುವನ್ನು ಮಗನ ಹತ್ತಿರ ಕರೆದುಕೊಂಡು ಬಂದಿದ್ದರು. ಎಲ್ಲ ವ್ಯರ್ಥವಾಯಿತು. ||106||
ಎಂತಹ ವಿಚಿತ್ರ ಈ ಜೀವನ! ಒಬ್ಬನಿಗೆ ಮಗ ಮತ್ತು ಒಬ್ಬನಿಗೆ ತಾಯಿ ಎಲ್ಲವೂ ಪೂರ್ವಜನ್ಮದ ಕರ್ಮಗಳ ವಿಧಿ ನಿಯಮ. ಎಲ್ಲಾ ಸ್ಥಳಗಳಲ್ಲಿಯೂ, ಎಲ್ಲಾ ಕಾಲಗಳಲ್ಲಿಯೂ ವಿಧಿ ಬರಹ ಅನಿವಾರ್ಯ. ||107||
ಈ ಕೆಟ್ಟ ವಾರ್ತೆಯನ್ನು ಕೇಳಿದ ಕೂಡಲೇ ನನ್ನ ಮನಸ್ಸು ಕುಂದಿತು. "ಗುರುವಿನ ಉಪಯೋಗ ಇಷ್ಟೇನಾ? ಅವನು ಒಬ್ಬನೇ ಮಗನನ್ನು ರಕ್ಷಿಸಲಾರದೇ ಹೋದನು". ||108||
ವಿಧಿ ಬರಹದ ಒತ್ತಡ ಸಾಯಿ ದರ್ಶನ ಮಾಡುವ ಆಸೆಯನ್ನು ತಣ್ಣಗಾಗಿಸಿತು. ಇದು ನನ್ನ ಪ್ರಯಾಣಕ್ಕೆ ಅಡ್ಡಿ ಉಂಟುಮಾಡಿತು. ||109||
"ನಾನು ಶಿರಡಿಗೆ ಏಕೆ ಹೋಗಲಿ? ನನ್ನ ಸ್ನೇಹಿತನ ಅವಸ್ಥೆ ಏನಾಯಿತು? ಗುರುವಿಗೆ ಅಂಟಿಕೊಂಡು ಆದ ಫಲ ಇದೇನು? ವಿಧಿ ಬರಹದ ಮುಂದೆ ಗುರು ಏನು ಮಾಡಲು ಸಾಧ್ಯ?” ||110||
ವಿಧಿ ಬರಹದ ರೀತಿ ನಡೆಯುವ ಹಾಗಿದ್ದರೆ, ಗುರುವನ್ನು ಹೊಂದಿರುವ ಅವಶ್ಯಕತೆಯೇನು? ಆದುದರಿಂದ ಶಿರಡಿಯ ಪ್ರಯಾಣವನ್ನು ರದ್ದುಗೊಳಿಸಿದೆ. ||111||
ತನ್ನ ಸ್ವಗೃಹವನ್ನು ಯಾವ ಕಾರಣಕ್ಕಾಗಿ ತ್ಯಜಿಸಬೇಕು? ಗುರುವನ್ನು ಹುಡುಕಿಕೊಂಡು ಏಕೆ ಹೋಗಬೇಕು? ಕಷ್ಟವನ್ನು ಬರಮಾಡಿಕೊಂಡು ಗೃಹಸುಖವನ್ನು ಏಕೆ ಬಿಡಬೇಕು? ಇದರ ಬಗ್ಗೆ ಏನೂ ಅರ್ಥವಾಗುವುದಿಲ್ಲ. ||112||
ತಾನಾಗಿಯೇ ಏನಾಗುತ್ತದೋ ಅದು ನಡೆಯಲಿ. ಕಷ್ಟವೋ ಸುಖವೋ ಏನಾದರೂ ಸರಿ. ನಡೆಯುವುದೇ ನಡೆಯುವಾಗ ಗುರುವಿನ ಆವಶ್ಯಕತೆಯಾದರೂ ಏಕೆ? ||113||
ಆದರೆ ಇಚ್ಛೆಯು ಬೇರೆ ಆದಾಗ್ಯೂ ವಿಧಿಬರಹವೇ ನೆರವೇರುತ್ತದೆ. ಅದರ ಮುಂದೆ ಬೇರೆ ಎಲ್ಲವೂ ಶಕ್ತಿ ಹೀನವಾಗುತ್ತವೆ. ಹಾಗೆ ನನ್ನನ್ನು ಶಿರಡಿಗೆ ಎಳೆತಂದಿತು. ||114||
ಜಿಲ್ಲಾಧಿಕಾರಿಗಳಾಗಿದ್ದ ನಾನಾಸಾಹೇಬ್ರವರು ಬೇಸಿನ್ಗೆ ಯಾತ್ರೆಹೊರಟರು. ಅವರು ಥಾಣೆಯಿಂದ ದಾದರ್ಗೆ ಬಂದು ರೈಲುನಿಲ್ದಾಣದಲ್ಲಿ ಸ್ವಲ್ಪ ಕಾಲ ಕಾಯುತ್ತಿದ್ದರು. ||115||
ಬೇಸಿನ್ಗೆ ರೈಲು ಆಗಮಿಸಲು ಒಂದು ಗಂಟೆಯ ಕಾಲ ಇತ್ತು. ಈ ದೀರ್ಘ ಸಮಯವನ್ನು ಬೇರೆ ಏನಾದರೂ ಕಾರ್ಯಕ್ಕೆ ಉಪಯೋಗಿಸಬಹುದಿತ್ತೆಂದು ಅನಿಸಿತು. ||116||
ಈ ಯೋಚನೆ ಮನಸ್ಸಿಗೆ ಬಂದಕೂಡಲೇ, ಬಾಂದ್ರಾಗೆ ಹೋಗುವ ರೈಲು ಬಂದಿತು ಮತ್ತು ಅವರು ಅದನ್ನು ಹತ್ತಿದರು. ||117||
ರೈಲು ನಿಲ್ದಾಣವನ್ನು ತಲಪುತ್ತಲೇ, ನನಗೆ ಆ ಸಮಾಚಾರ ತಿಳಿಯಿತು ಮತ್ತು ಅವರನ್ನು ಭೇಟಿಯಾಗಲು ಕೂಡಲೇ ಹೊರಟೆನು. ಭೇಟಿಯಾದ ಕೂಡಲೇ ಶಿರಡಿಯ ಬಗ್ಗೆ ಮಾತುಕತೆ ಪ್ರಾರಂಭವಾಯಿತು. ||118||
"ನೀವು ಯಾವಾಗ ಸಾಯಿದರ್ಶನಕ್ಕೆ ಹೋಗುವಿರಿ? ಶಿರಡಿಗೆ ಹೋಗಲು ಆಲಸ್ಯವೇಕೆ? ಏಕೆ ವೃಥಾಕಾರಣ ನೀಡುತ್ತಿರುವಿರಿ? ನಿಮ್ಮ ಮನಸ್ಸು ಏಕೆ ಶಾ೦ತವಾಗಿಲ್ಲ?" ||119||
ನಾನಾರವರ ಕಾತುರತೆಯನ್ನು ಕಂಡು ನನಗೆ ನಾಚಿಕೆಯಾಯಿತು. ನನ್ನ ಮನಸ್ಸಿನ ಚಂಚಲತೆಯನ್ನು ಸ್ಪಷ್ಟವಾಗಿ ಅವರಿಗೆ ತಿಳಿಸಿದೆನು. ||120||
ಆದ್ದರಿ೦ದ, ನಾನಾರವರ ಶ್ರದ್ಧಾಯುಕ್ತವಾದ, ಪ್ರೀತಿಯ, ಪರಿಶುದ್ಧವಾದ ಉಪದೇಶ ನನ್ನಲ್ಲಿ ಶಿರಡಿಗೆ ಪ್ರಯಾಣಮಾಡುವ ಇಚ್ಛೆಯನ್ನು ಉತ್ಕಟಗೊಳಿಸಿತು. ||121||
ನಾನಾರವರು, ನನ್ನಿಂದ, "ನಾನು ಕೂಡಲೇ ಹೊರಡುತ್ತೇನೆ" ಎಂಬ ಪ್ರಮಾಣವಚನ ಸ್ವೀಕರಿಸಿದ ನಂತರವೇ ಅಲ್ಲಿಂದ ಹೊರಟರು. ನಾನು ಹಿಂತಿರುಗಿದೆನು ಮತ್ತು ಒ೦ದು ಶುಭಮುಹೂರ್ತದಲ್ಲಿ ಪ್ರಯಾಣ ಮಾಡಲು ನಿರ್ಧರಿಸಿದೆನು. ||122||
ನನ್ನ ಸಾಮಾನುಗಳನ್ನು ಜೋಡಿಸಿ ಮನೆಯ ಕಡೆ ಎಲ್ಲಾ ತಯಾರಿ ನಡೆಸಿದೆನು. ಅದೇ ದಿನ, ಸಂಜೆ ಶಿರಡಿಯ ಕಡೆ ಪ್ರಯಾಣ ಬೆಳೆಸಿದೆನು. ||123||
ಸಂಜೆಯ ಮೇಲ್ ರೈಲು ದಾದರ್ನಲ್ಲಿ ನಿಲ್ಲುತ್ತದೆಂದು ನಾನು ಯೋಚಿಸಿದೆ. ಆದ್ದರಿ೦ದ ಅದರ ಹಣವನ್ನು ಪಾವತಿಸಿ ದಾದರ್ ನಿಲ್ದಾಣಕ್ಕೆ ಟಿಕೆಟ್ ತೆಗೆದುಕೊಂಡೆ.? ||124||
ನಾನು ಕೂಡಲೇ ರೈಲು ಹತ್ತಿದೆನು. ರೈಲು ಇನ್ನೂ ಬಾಂದ್ರಾದಲ್ಲೇ ನಿಂತಿತ್ತು. ಆಗ ಒಬ್ಬ ವಯಸ್ಸಾದ ಮುಸ್ಲಿಮನು ಬೋಗಿಯೊಳಗೆ ಅವಸರದಿಂದ ಹತ್ತಿದ. ಕೂಡಲೇ ರೈಲು ಚಲಿಸಲು ಪ್ರಾರಂಭಿಸಿತು. ||125||
ನಾನು ದಾದರ್ ನಿಲ್ದಾಣಕ್ಕೆ ಟಿಕೇಟು ತೆಗೆದುಕೊಂಡಿದ್ದು, ನನ್ನ ಯಾತ್ರೆಯ ಪ್ರಾರಂಭದಿಂದಲೇ ಮೇಣದ ನೊಣದಂತೆ ಒಂದು ಅಡಚಣೆಯಾಗಿತ್ತು. ||126||
ನನ್ನ ಪ್ರಯಾಣದ ಚೀಲ ಮತ್ತು ಸಾಮಾನುಗಳನ್ನು ನೋಡಿ ಆ ಮುಸಲ್ಮಾನನು, ಎಲ್ಲಿಗೆ ಹೋಗುತ್ತಿರುವೆನೆಂದು ಕೇಳಿದನು. ನಾನು ದಾದರಿಗೆ ಹೋಗಿ ಅಲ್ಲಿಂದ ಮೇಲ್ ಹಿಡಿದು ಮನಮಾಡ್ಗೆ ಹೋಗುತ್ತಿರುವೆನೆಂದು ತಿಳಿಸಿದೆನು. ||127||
ಆಗ ಅವನು ನನಗೆ ಸಮಯೋಚಿತವಾಗಿ, 'ದಾದರ್ನಲ್ಲಿ ಮೇಲ್ ನಿಲ್ಲದೆ ಇರುವುದರಿಂದ ವಿಕ್ಟೋರಿಯಾ ಟರ್ಮಿನಲ್ವರೆಗೆ ಪ್ರಯಾಣ ಮುಂದುವರಿಸಿ ಅಲ್ಲಿಂದ ಮೇಲ್ಗಾಡಿ ಹಿಡಿಯಿರಿ' ಎಂದು ತಿಳಿಸಿದನು. ||128||
ಈ ಸಮಯೋಚಿತವಾದ ಸಲಹೆ ನನಗೆ ದೊರರದಿದ್ದಲ್ಲಿ ನಾನು ದಾದರ್ನಲ್ಲಿ ಮೇಲ್ನ್ನು ಹಿಡಿಯುತ್ತಿರಲಿಲ್ಲ. ಆಗ ನನ್ನ ಚಂಚಲ ಮನಸ್ಸು ಯಾವರೀತಿ ಪ್ರತಿಕ್ರಿಯಿಸುತ್ತಿತ್ತೋ ತಿಳಿಯದು. ||129||
ಆದರೆ ಆ ದಿನ ನನ್ನ ಯಾತ್ರೆ ನಿಗದಿಯಾಗಿತ್ತು. ಅದೃಷ್ಟವಶಾತ್ ಈ ಅನುಕೂಲಕರವಾದ, ನಾನು ಹೇಳಲಿರುವ ಘಟನೆ ಅನಿರೀಕ್ಷಿತವಾಗಿ ನಡೆಯಿತು. ||130||
ಮಾರನೆ ದಿನ ಬೆಳಿಗ್ಗೆ 9 ರಿಂದ 10 ಗಂಟೆ ಒಳಗೆ ನಾನು ಶಿರಡಿ ತಲಪಿದೆನು. ಅಲ್ಲಿ ಭಾವುಸಾಹೇಬ್ ದೀಕ್ಷಿತ್ರು ನನಗಾಗಿ ಕಾಯುತ್ತಿದ್ದರು. ||131||
ಇದು ಕ್ರಿ. ಶ. 1910ರಲ್ಲಿ ನಡೆಯಿತು. ಆಗ ಅಲ್ಲಿ 'ಸಾಠೇವಾಡಾ'ದಲ್ಲಿ ಮಾತ್ರ ಯಾತ್ರಿಗಳಿಗೆ ತಂಗಲು ಅವಕಾಶ ಅತ್ತು. ||132||
ನಾನು ಟಾಂಗಾದಿ೦ದ ಇಳಿಯುತ್ತಿದ್ದಂತೆಯೇ, ನನ್ನ ಮನಸ್ಸು ಸಾಯಿ ದರ್ಶನಕ್ಕಾಗಿ ಕಾತರಪಟ್ಟು ಉಸಿರುಕಟ್ಟಿದಂತಾಯಿತು. ನಾನು ಯಾವಾಗ ಅವರ (ಸಾಯಿಯ) ಚರಣಗಳಲ್ಲಿ ನನ್ನ ಶಿರವನ್ನು ಇಟ್ಟೇನು ಎಂದೆನಿಸಿತು. ನಿರೀಕ್ಷೆಯಿಂದ ಸಂತಸದ ಅಲೆಗಳು ನನ್ನ ಹೃದಯದಲ್ಲಿ ಉಕ್ಕಿ ಬಂದವು. ||133||
ಆ ಕೂಡಲೇ ತಾತ್ಯಾ ಸಾಹೇಬ್ ನೂಲ್ಕರ್- ಅತ್ಯಂತ ಹೆಸರಾಂತ ಮತ್ತು ಪ್ರಮುಖ ಸಾಯಿಭಕ್ತನು - ಮಸೀದಿಯಿಂದ ಹಿಂತಿರುಗಿ ಬಂದು ಕೂಡಲೇ ದರ್ಶನಕ್ಕಾಗಿ ಹೋಗಲು ತಿಳಿಸಿದನು. ||134||
ಬಾಬಾರವರು, ತಮ್ಮ ಶಿಷ್ಯರೊಡನೆ ವಾಡಾದ ಒಂದು ಮೂಲೆಯಲ್ಲಿದ್ದಾರೆ. ಬನ್ನಿ, ಅವರ ಚರಣಗಳಿಗೆ ವಂದಿಸೋಣ, ಅನ೦ತರ ಅವರು ಲೇಂಡಿಗೆ ಹೋಗುತ್ತಾರೆ. ||135||
"ಅನ೦ತರ ಸ್ನಾನಮಾಡಿ, ಬಾಬಾರವರು ಹಿಂದಿರುಗಿದ ಮೇಲೆ ನೀವು ಮಸೀದಿಗೆ ಹೋಗಬಹುದು. ಮತ್ತು ಸಾಯಿಯ ದರ್ಶನವನ್ನು ಪುನಃ ಸಾವಕಾಶವಾಗಿ ಪಡೆಯಬಹುದು." ||136||
ಅದನ್ನು ಕೇಳಿದಕೂಡಲೇ ನಾನು ಆತುರವಾಗಿ ಬಾಬಾರವರು ಇದ್ದ ಜಾಗಕ್ಕೆ ಓಡಿಹೋದೆ ಮತ್ತು ಅವರ ಚರಣಧೂಳಿಯಲ್ಲಿ ಹೊರಳಾಡಿದೆ. ನನ್ನ ಸಂತಸಕ್ಕೆ ಪಾರವಿಲ್ಲದಾಯಿತು. ||137||
ನಾನು ಪ್ರತ್ಯಕ್ಷಪಗಿ ಕಂಡಿದ್ದು ನಾನಾಸಾಹೇಬ್ರವರು ಹೇಳಿದ್ದಕ್ಕಿಂತಲೂ ಮಿಗಿಲಾಗಿತ್ತು. ನಾನು ಕೃತಾರ್ಥನಾದೆನೆಂದೂ ಅನುಗ್ರಹೀತನಾದೆನೆಂದೂ ಭಾವಿಸಿದೆ. ನನ್ನ ಕಣ್ಣುಗಳು ತುಂಬಿಬಂದುವು. ||138||
ಅಂತಹ ವ್ಯಕ್ತಿಯನ್ನು ನಾನೆಂದೂ ನೋಡಿರಲಿಲ್ಲ ಮತ್ತು ಕೇಳಿಯೂ ಇರಲಿಲ್ಲ. ಅಂತಹ ಗೌರವಾನ್ವಿತ ವ್ಯಕ್ತಿಯನ್ನು ನೋಡಿ ಕೃತಾರ್ಥನಾದೆ. ನನ್ನ ಹಸಿವು ಬಾಯಾರಿಕೆಗಳು ಮಾಯವಾದವು. ನನ್ನ ಇಂದ್ರಿಯಗಳು ಸ್ರಬ್ಧವಾದುವು. ||139||
ಸಾಯಿಯ ಚರಣ ಸ್ಪರ್ಶದಿಂದ ನಾನು ನನ್ನ ಜೀವನದ ಉನ್ನತ ಸ್ತರವನ್ನು ಗಳಿಸಿದೆ. ಅಲ್ಲಿಂದ ನನ್ನ ಹೊಸ ಜೀವನದ ಶುಭಾರಂಭವಾಯಿತು. ||140||
ಯಾರ ಕಾರಣದಿಂದ ಈ ಸಂತರ ಸಂಗ ದೊರೆಯಿತೊ ಅವರಿಗೆ ನಾನು ಸಂಪೂರ್ಣವಾಗಿ ಕೃತಜ್ಞನಾಗಿದ್ದೇನೆ. ಪ್ರತಿನಾಡಿಯಲ್ಲೂ ಸಂತಸ ಉಸಕ್ಕಿಬರುತ್ತಿದೆ. ||141||
ಅವರು ನನ್ನ ನಿಜವಾದ ಬಂಧು-ಬಾಂಧವರು. ಅವರಿಂದಲೇ ನಾನು ಪರಮಾನಂದವನ್ನು ಅನುಭವಿಸಲು ಸಾಧ್ಯವಾಯಿತು. ಅವರಿಗಿಂತ ಆತ್ಮೀಯ ಬಂಧುಗಳು ಇನ್ನು ಯಾರೂ ಇಲ್ಲ. ನನ್ನ ಹೃದಯಾಂತರಾಳದಲ್ಲಿ ಇದನ್ನು ನಂಬಿದ್ದೇನೆ. ||142||
ಇದೆಂತಹ ಮಹತ್ತಾದ ಸಂಬಂಧ! ನಾನು ಇದನ್ನು ತಾಳಲಾರದವನಾಗಿದ್ದೇನೆ. ಆದುದರಿಂದ ನನ್ನ ಕರಗಳನ್ನು ಜೋಡಿಸಿ ವಂದಿಸುತ್ತ, ನನ್ನ ಶಿರವನ್ನು ಅವರ ಚರಣಗಳಲ್ಲಿಡುತ್ತೇನೆ. ||143||
ನನಗೆ ಸಾಯಿಯ ದರ್ಶನ ಭಾಗ್ಯ ದೊರಕಿತು. ಮತ್ತು ನನ್ನ ಮನಸ್ಸಿನ ಸಂದೇಹಗಳೆಲ್ಲ ಮಾಯವಾದವು. ಅದಕ್ಕಿಂತ ಮಿಗಿಲಾಗಿ ನನಗೆ ಸಾಯಿಯ ಸಂಪರ್ಕ ದೊರಕಿತು. ಅದು ನಾನು ಅನುಭವಿಸಿದ ಆನಂದಕ್ಕಿಂತ ಮಿಗಿಲಾದುದು. ||144||
ಸಾಯಿದರ್ಶನವು ಒಂದು ಅಭೂತಪೂರ್ವ ಅನುಭವ. ಅವರೊಂದಿಗೆ ಸ್ವಭಾವ ಸಂಪೂರ್ಣವಾಗಿ ಬದಲಾಗುತ್ತದೆ. ಪೂರ್ವಕರ್ಮಗಳ ನೆನಪು ಮಾಯವಾಗುತ್ತದೆ. ಮತ್ತು ಕ್ರಮೇಣ ಲೌಕಿಕ ಸುಖಗಳ ಬಗ್ಗೆ ಅನಾಸಕ್ತಿ ಉಂಟಾಗುತ್ತದೆ. ||145||
ಹಿಂದಿನ ಅನೇಕ ಜನ್ಮಗಳ ಸಂಚಿತ ಪಾಪಕರ್ಮಗಳು ಅವರ ಒಂದು ಕರುಣಾಪೂರಿತ ದೃಷ್ಟಿಯಿಂದಲೇ ನಾಶವಾಗುತ್ತವೆ. ಸಾಯಿ ಚರಣಗಳಲ್ಲಿ ಭರವಸೆ ಮತ್ತು ಅಪರಿಮಿತವಾದ ಸಂತಸವು ದೊರಕುತ್ತದೆ ||146||
ಅದೃಷ್ಟವಶಾತ್ ನಾನು ಸಾಯಿ ಚರಣಗಳನ್ನು ಸೇರಿದೆ. ಅವು ಮಾನಸ ಸರೋವರದಷ್ಟು ಪವಿತ್ರವಾಗಿವೆ. ಅವು ನನ್ನಂತಹ ಕಾಗೆಯನ್ನೂ ಸಹ ಹಂಸವನ್ನಾಗಿ ಪರಿವರ್ತಿಸುತ್ತದೆ. ಸಾಯಿಯು ಒಬ್ಬ ಮಹಾತ್ಮ್, ಸಂತರಲ್ಲಿ ಅಗ್ರಗಣ್ಯ, ಮಹಾತಪಸ್ವಿ ಮತ್ತು ಮಹಾಯೋಗಿ. ||147||
ಅವನು ಪಾಪನಾಶಕ, ದುಃಖನಾಶಕ ಮತ್ತು ಕಷ್ಟಗಳನ್ನು ಪರಿಹರಿಸುವವನು. ಅಂತಹ ಸಾಯಿಯ ದರ್ಶನ ಪಡೆದು ನಾನು ಅತ್ಯಂತ ಪುನೀತನಾಗಿದ್ದೇನೆ. ಅಂತಹವರ ಸಹವಾಸ ಪಡೆದು ಅನುಗ್ರಹೀತನಾಗಿದ್ದೇನೆ. ||148||
ಸಾಯಿನಾಥ ಮಹಾರಾಜರನ್ನು ಸಂಧಿಸಿದ್ದು ನನ್ನ ಪೂರ್ವ ಜನ್ಮಗಳ ಫಲವೇ ಆಗಿದೆ. ಕಣ್ಣುಗಳಲ್ಲಿ ಸಾಯಿರೂಪವನ್ನು ತುಂಬಿಕೊಂಡಲ್ಲಿ ಇಡೀ ಪ್ರಪಂಚವೇ ಸಾಯಿಮಯವಾಗುತ್ತದೆ. ||149||
ಶಿರಡಿಯಲ್ಲಿ ಕಾಲಿಟ್ಟ ಮೊದಲನೆಯ ದಿನ ಬಾಳಾಸಾಹೇಬ್ ಭಾಟಿ ಯವರೊಂದಿಗೆ ಗುರುವಿನ ಅವಶ್ಯಕತೆಯ ಬಗ್ಗೆ ವಾಗ್ವಾದ ಉಂಟಾಯಿತು. ||150||
"ಒಬ್ಬರ ಸ್ವಾತಂತ್ರ್ಯವನ್ನು ತ್ಯಜಿಸಿ ಮತ್ತೊಬ್ಬರ ಮೇಲೆ ಹೇಗೆ ನಂಬಿಕೆ ಇಡಬೇಕು? ತನ್ನ ಕರ್ತವ್ಯಗಳನ್ನು ತಾನೇ ಸ್ವತಃ ಮಾಡುವ ಸ್ವಸಾಮರ್ಥ್ಯ ಇರುವಾಗ ಗುರುವಿನ ಆವಶ್ಯಕತೆ ಏಕೆ? ||151||
ಪ್ರತಿಯೊಬ್ಬನೂ ತನ್ನ ಕರ್ತವ್ಯಗಳನ್ನು ತಾನೇ ನಿರ್ವಹಿಸಬೇಕು. ಯಾರು ತಮ್ಮ ಕರ್ತವ್ಯಗಳನ್ನು ಮಾಡುವುದಿಲ್ಲವೋ ಅವರಿಗೆ ಗುರುವು ತಾನೆ ಏನು ಮಾಡಲು ಸಾಧ್ಯ? ಯಾರು ಐಷಾರಾಮಿಗಳೋ, ವಿಲಾಸಿ ಮತ್ತು ಆಲಸಿಗಳೋ ಅವರಿಗೆ ಯಾರು ತಾನೆ ಏನನ್ನು ಕೊಡಬಲ್ಲರು?" ||152||
ಅದು ನನ್ನ ಸಾಧಾರಣವಾದ ಅಹವಾಲು. ಮತ್ತೊಂದೆಡೆ ಇದಕ್ಕೆ ವಿರುದ್ಧವಾದ ಅಭಿಪ್ರಾಯವಿತ್ತು. ವಾದ-ವಿವಾದಗಳು ಎರಡೂ ಕಡೆಯಲ್ಲಿ ಸಮನಾಗಿದ್ದವು. ಹಾಗಾಗಿ ವಿರೋಧಾಭಾಸ ಮುಂದುವರೆಯಿತು. ||153||
ಈ ವಿರೋಧಾಭಾಸಕ್ಕೆ ಕಾರಣ ನಮ್ಮಲ್ಲಿ ಆತ್ಮವಿಶ್ವಾಸ ಇಲ್ಲದಿರುವುದು. ಇದು 'ಅಹಂ'ಕಾರಕ್ಕೆ ಕುರುಹು, ಅದಿಲ್ಲದೆ ಈ ಜಗತ್ತಿನಲ್ಲಿ ಯಾವುದೇ ವಾದವಿವಾದಗಳು ಇರುವುದಿಲ್ಲ. ||154||
ವಿರೋಧಪಕ್ಷದವರ ವಾದವೇನೆಂದರೆ, ಒಬ್ಬ ವ್ಯಕ್ತಿಯು ವಿದ್ಯಾವಂತನಾಗಿದ್ದರೂ, ವೇದಪಾರಂಗತನಾಗಿದ್ದರೂ ಗುರುವಿನ ಕೃಪೆಯಿಲ್ಲದಿದ್ದಲ್ಲಿ ಅಂತಹ ವ್ಯಕ್ತಿ ಕೇವಲ ಬಂಧಿಯಾದ ಪಂಡಿತನಂತಿರುತ್ತಾನೆ. ||155||
ಒಬ್ಬನ ಸ್ವಪ್ರಯತ್ನಕ್ಕಿಂತ ವಿಧಿಬರಹ ಮುಖ್ಯವೇ? ವೃಥಾವಾದವು ಉಲ್ಬಣಗೊಂಡಿತು. ಮತ್ತು ನಾನು ಹೇಳಿದೆ "ಕೇವಲ ವಿಧಿಬರಹದ ಮೇಲೆ ಪೂರ್ಣವಾಗಿ ಅವಲಂಬಿಸಿ ಏನು ಸಾಧಿಸುವೆ?" ||156||
ಆಗ ವಿರೋಧಪಕ್ಷದವರು ಹೇಳಿದರು - "ವಿಧಿಬರಹವನ್ನು ತಪ್ಪಿಸಲಾಗುವುದಿಲ್ಲ. ಭವಿಷ್ಯವನ್ನು ಬದಲಾಯಿಸಲಾಗುವುದಿಲ್ಲ. ಎಷ್ಟೇ ಸ್ವಾಭಿಮಾನಿಯಾದರೂ ಇದರ ಬಗ್ಗೆ ವಿವಶ ||157||
"ವಿಧಿಯನ್ನು ಎದುರಿಸಲು ಯಾರಿಗೆ ತಾನೇ ಸಾಧ್ಯ? ನೀನು ಏನಾದರೂ ಮಾಡಲು ಪ್ರಯತ್ನಿಸಬಹುದು. ನಿನ್ನ ವಾಕ್ಚಾತುರ್ಯವನ್ನು ನಿನ್ನಲ್ಲೇ ಇಟ್ಟುಕೋ. ನಿನ್ನ 'ಅಹಂ'ಕಾರವನ್ನು ಬಿಡಲೇಬೇಕು". ||158||
ನಾನು ಹೇಳಿದೆ - "ಹಾಗೆಂದು ನೀವು ಹೇಗೆ ಹೇಳುವಿರಿ? ಪ್ರಯತ್ನಶೀಲ ವ್ಯಕ್ತಿಯು ಎಲ್ಲವನ್ನೂ ಪಡೆಯುತ್ತಾನೆ. ವಿಧಿಯು ಆಲಸಿಗನಿಗೆ ಹೇಗೆ ಸಹಾಯಮಾಡುತ್ತದೆ"? ||159||
ಪ್ರತಿಯೊಬ್ಬ ವ್ಯಕ್ತಿಯೂ ಸ್ವಪ್ರಯತ್ನದಿಂದಲೇ ಮೇಲೆ ಬರಬೇಕು - ಎಂದು ಸ್ಮತಿಗಳು ವಿವರಿಸುತ್ತವೆ. ಅದನ್ನು ಕಡೆಗಣಿಸಿ ಮುಂದುವರೆಯಲು ಸಾಧ್ಯವಿಲ್ಲ. ||160||
ಏನನ್ನಾದರೂ ಮಾಡಬೇಕೆಂದಿದ್ದರೆ ತಾನೇ ಸ್ಪತಃ ಮಾಡಬೇಕು. ಗುರುವನ್ನು ಏಕೆ ಅನುಸರಿಸಬೇಕು? ಒಬ್ಬ ವ್ಯಕ್ತಿಯು ಎಚ್ಚರಿಕೆ ತಪ್ಪಿದರೆ ಗುರು ಒಬ್ಬ ಸಾಲದು. ||161||
ದುಷ್ಟ ಕೆಲಸ ಮಾಡುವವರಿಗೆ ಪಕ್ಷಪಾತಿಗಳಿಗೆ ಅಶುದ್ಧರಿಗೆ ಗುರುವು ಸಫಲತೆಯನ್ನು ಹೇಗೆ ತಾನೇ ಕೊಡಲು ಸಾಧ್ಯ? ||162||
ವಾದಕ್ಕೆ ಅಂತ್ಯವಿಲ್ಲ. ಅದರಿಂದ ಫಲವಿಲ್ಲ. ಅದರ ಒ೦ದೇ ಸಾಧನೆ ಎಂದರೆ ನನ್ನ ಮನತಶ್ಶಾಂತಿಯನ್ನು ಕಳೆದುಕೊಳ್ಳುವುದು. ||163||
ಈ ರೀತಿ ವಾದ ಪ್ರತಿವಾದಗಳು ಮುಂದುವರೆದವು. ಯಾರಿಗೂ ಕ್ಷಣವಾದರೂ ದಣಿವಾಗಲಿಲ್ಲ. ಸುಮಾರು ಐವತ್ತು ನಿಮಿಷಗಳು ಕಳೆದವು. ಕೊನೆಗೆ ಅದು ನಿಂತಿತು. ||164||
ಕೆಲವು ಭಕ್ತರೊಡನೆ ಮಸೀದಿಗೆ ಬಂದ ಕೂಡಲೇ, ಬಾಬಾರವರು ಕಾಕಾಸಾಹೇಬರನ್ನು ಏನು ಕೇಳಿದರೆಂದು ಆಲಿಸಿ. ||165||
"ವಾಡೆಯಲ್ಲಿ ಏನು ನಡೆಯಿತು? ವಿರೋಧಾಭಾಸವು ಏನದು? ಹೇಮಾದಪಂತ ಏನು ಹೇಳಿದ"? ಸಾಯಿ ನನ್ನ ಕಡೆ ನೋಡುತ್ತ ಕೇಳಿದರು. ||166||
ವಾಡಾ ಮತ್ತು ಮಸೀದಿಗಳ ಮಧ್ಯೆ ಸಾಕಷ್ಟು ದೂರವಿತ್ತು. ಹಾಗಿದ್ದಲ್ಲಿ ಬಾಬಾರವರಿಗೆ ಹೇಗೆ ತಿಳಿಯಿತು? ನನ್ನಲ್ಲಿ ಅಚ್ಚರಿ ಮೂಡಿಸಿತು. ||167||
ಅದೇನಾದರಾಗಲಿ, ಬಾಬಾರವರ ಪದಗಳು ನನ್ನನ್ನು ಬೆಚ್ಚಿಸಿದವು ಮತ್ತು ನನಗೆ ನಾಚಿಕೆಯಾಯಿತು. ನಾನು ಮೌನಿಯಾದೆ. ಈ ರೀತಿಯ ನನ್ನ ಅಜ್ಞಾನವು ಮೊದಲನೆಯ ಭೇಟಿಯಲ್ಲೇ ಬಯಲಾಯಿತು. ||168||
ಬೆಳಗ್ಗೆ ನಡೆದ ಈ ವಾಗ್ಧಾದವೇ ಬಾಬಾರವರು ನನಗೆ "ಹೇಮಾದಪಂತ" ಎಂದು ನಾಮಕ ಮಾಡಲು ಕಾರಣವಾಯಿತು. ಅವರು ಅದರಿಂದಲೇ ಹೇಮಾದನನ್ನು ನೆನಪಿಸಿಕೊಂಡಿರಬೇಕು. ||169||
ದೇವಗಿರಿಯ ಯಾದವ ರಾಜರು ದೌಲತಾಬಾದ್ನ ಜಾಧವರೆಂದು ಕರೆಯಲ್ಪಟ್ಟಿದ್ದರು. 13ನೆಯ ಶತಮಾನದಲ್ಲಿ ಅವರ ರಾಜ್ಯದ ವೈಭವವು ಮಹಾರಾಷ್ಟದ ಹೆಮ್ಮೆಯನ್ನು ಹೆಚ್ಚಿಸಿತ್ತು. ||170||
ರಾಜಾ ಮಹಾದೇವನು ಅತ್ಯಂತ ಗೌರವಯುತ ವೈಭವೋಪೇತ ಚಕ್ರವರ್ತಿಯಾಗಿದ್ದನು. ಅವನ ಸೋದರಳಿಯನೂ ಸಹ ಅನೇಕ ಧರ್ಮಕಾರ್ಯಗಳಿಗಾಗಿ ಹೆಸರುವಾಸಿಯಾದನು. ||171||
ಅವನು 'ರಾಮರಾಜ'ನಾಗಿದ್ದನು. ಯಾದವರ ರಾಜ್ಯದ ಒಂದು ಮಾಸದ ವಜ್ರವಾಗಿದ್ದನು. ಹೇಮಾದ್ರಿಯು ಇಬ್ಬರಿಗೂ ಮಂತ್ರಿಯಾಗಿದ್ದನು. ತುಂಬಾ ಗುಣವಂತನೂ, ಅನೇಕ ಸಾಧನೆಗಳನ್ನು ಮಾಡಿದವನೂ ಆಗಿದ್ದನು. ||172||
ಹೇಮಾದ್ರಿಯು ಧರ್ಮಶಾಸ್ತ್ರದ ಬಗ್ಗೆ ಒಂದು ಗ್ರಂಥವನ್ನು ರಚಿಸಿದ್ದನು. ಅವನು ಬ್ರಾಹ್ಮಣರನ್ನು ಕಂಡು ಬಹುವಾಗಿ ಗೌರವಿಸುತ್ತ ಧರ್ಮಶಾಸ್ತ್ರವನ್ನು ಪ್ರಥಮವಾಗಿ ರಚಿಸಿದವನು. ||173||
ಹೇಮಾದ್ರಿಯು "ಚತುರ್ವರ್ಗ ಚಿಂತಾಮಣಿ" ಎಂಬ ಗ್ರಂಥವನ್ನೂ ರಚಿಸಿದನು. ಅದು ಒಂದು ಧರ್ಮಮಾರ್ಗದ ಆಚರಣೆಗಳ, ಪವಿತ್ರ ತೀರ್ಥಯಾತ್ರೆ ಮತ್ತು ಮುಕ್ತಿಮಾರ್ಗದ ಬಗ್ಗೆ ಇರುವ ವಿಷಯಗಳ ಗಣಿಯಾಗಿದೆ. ||174||
ಸಂಸ್ಕೃತದ ಹೆಸರಾದ 'ಹೇಮಾದ್ರಿಪಂತ' ಎನ್ನುವುದು ಪ್ರಾಕೃತಬಾಷೆಯಲ್ಲಿ 'ಹೇಮಾದಪಂತ' ಎಂದಾಯಿತು. ಅಂದಿನ ಕಾಲದಲ್ಲಿ ಅವನು ಆಡಳಿತದಲ್ಲಿ ವಿಶಾರದನೂ, ಪರಿಣತನೂ ಆಗಿದ್ದನು. ||175||
ಅವನದು 'ವತ್ಸ' ಎಂಬ ಋಷಿಗೋತ್ರ ಮತ್ತು ನನ್ನದು 'ಭರದ್ವಾಜ ಗೋತ್ರ'. ಅವನ ಗೋತ್ರದಲ್ಲಿ ಐದು ಪ್ರಮುಖ ವ್ಯಕ್ತಿಗಳು. ಆದರೆ, ನನ್ನದರಲ್ಲಿ ಮೂರು ಜನ. ಅವನು ಯಜುರ್ವೇದಿಯು, ನಾನು ಖುಗ್ದೇದಿ. ಅವನು ಧರ್ಮಶಾಸ್ತ್ರ ವಿಶಾರದನು, ನಾನಾದರೋ ಅಜ್ಜಾನಿ. ||176||
ಅವನು ಮಾಧ್ಯಂದಿನ, ನಾನಾದರೋ ಶಾಕಲ, ಅವನು ಕಲಿತವನು, ನಾನು ಒಬ್ಬ ಮೂರ್ಖ. ಅವನು ಪಂಡಿತ, ನಾನು ಅಜ್ಞಾನಿ. ಹಾಗಿರುವಾಗ ಈ ಅನ್ವರ್ಥನಾಮ ನನಗೇಕೆ? ||177||
ಅವನು ಕುಶಲ ರಾಜಕಾರಣಿ ಮತ್ತು ರಾಜ್ಯದ ವ್ಯಕ್ತಿ (ಸ್ಟೇಟ್ಸ್ ಮನ್) ನಾನಾದರೋ ಬುದ್ಧಿಹೀನ. ಅವನ ಸಂಸ್ಕೃತ ಗ್ರಂಥ 'ರಾಜ್ಯಪ್ರಶಸ್ತಿ'ಯು ಬಹಳ ಪ್ರಸಿದ್ಧವಾಗಿತ್ತು. ಆದರೆ ನಾನು ಕಾವ್ಯದ ಒ೦ದು ಸಾಲನ್ನೂ ರಚಿಸಲಾರದವನಾಗಿದ್ದೆನು. ||178||
ಅವನು ಲೇಖಕ ಮತ್ತು ಅಂದಿನ ದಿನಗಳಲ್ಲಿ ಕುಶಲ ಕಲೆಗಳಲ್ಲಿ ಪರಿಣಿತನು. ನಾನು ಅವಿದ್ಯಾವಂತ ಮತ್ತು ಅಜ್ಞಾನಿ. ಅವನು ಬುದ್ಧಿವಂತ ಮತ್ತು ಧರ್ಮಶಾಸ್ತ್ರದಲ್ಲಿ ಪಂಡಿತೋತ್ತಮ, ನಾನಾದರೋ ದಡ್ಡನು. ||179||
ಅವನ ಗ್ರಂಥ 'ಲೇಖನ ಕಲ್ಪತರು'. ಅನೇಕ ವಿಧವಾದ ಕಾವ್ಯಗಳ ಗಣಿಯೇ ಆಗಿದೆ. ನಾನು ಬಾಬಾರವರ ಒಬ್ಬ ಮುಗ್ಧ ಮಗು. “ಓವಿ” ಛಂದಸ್ಸಿನಲ್ಲಿ ಒಂದು ಸಾಲನ್ನೂ ರಚಿಸದವನು. ||180||
ಗೋರ, ಚೋರ, ಸಪ್ತಮಾಲಿ, ನಿವೃತ್ತಿ, ಧ್ಯಾನೋಬಾ, ನಾಮ ಮತ್ತಿತರರು ಭಾಗವತ ಧರ್ಮವನ್ನು ಪ್ರಾಮುಖ್ಯತೆಗೆ ತಂದು ಈ ಕಾಲದಲ್ಲಿ ಮೇಲೇರಿದರು. ||181||
ವಿದ್ಯಾವಂತರ ಸಂಗದಲ್ಲಿ ಹೇಮಾದ್ರಿಪಂತನು ಆಡಳಿತಾಧಿಕಾರಿಯಾಗಿದ್ದು ಪಂಡಿತ್ ಬೋಪೇಡಿಯೋ ವಿದ್ವಾಂಸರಲ್ಲಿ ವಜ್ರದಂತೆ ಹೊಳೆದವರು. ಅಂತಹವರಿಗೆ ಸಮನಾದ ಸ್ಥಾನವನ್ನು ಗಳಿಸಿದರು. ||182||
ಅಲ್ಲಿಂದ ಮುಂದೆ ಉತ್ತರಭಾರತದಿಂದ ಮುಸ್ಲಿಂ ಸೈನಿಕರು ಕೆಳಗೆ ಬಂದರು ಮತ್ತು ಮುಸ್ಲಿಮರ ರಾಜ್ಯಭಾರ ಎಲ್ಲೆಡೆ ಪ್ರಾರಂಭವಾಯಿತು. ದಕ್ಷಿಣದ ಆಡಳಿತ ಕೊನೆಗೊಂಡಿತು. ||183||
ನನ್ನ ಬುದ್ಧಿಶಕ್ತಿಗಾಗಿ ಈ ಬಿರುದನ್ನು ನನಗೆ ಕೊಟ್ಟಿಲ್ಲ. ಆದರೆ ನನ್ನ ವಾಗ್ದಾದದ ವೈಖರಿಗಾಗಿ ನೀಡಿದ ಇದು ನನ್ನ 'ಅಹಂ'ಕಾರವನ್ನು ನಾಶಮಾಡಲು ಸಹಕಾರಿಯಾಯಿತು. ||184||
ನನಗೆ ಸಾಕಷ್ಟು ಜ್ಞಾನವಿರಲಿಲ್ಲ ಮತ್ತು ಆವಶ್ಯಕವಾದ ಯೋಗ್ಯತೆ ಇಲ್ಲದೆ ನಾನು ಮಾತನಾಡುತ್ತಿದ್ದೆ ಅವರು ಅಂಜನದಿಂದ ನನ್ನ ಕಣ್ಣುಗಳನ್ನು ತೆರೆಸಿ ನನ್ನ ತಪ್ಪುಗಳನ್ನು ಸಂದರ್ಭೋಚಿತವಾಗಿ ತಿದ್ದಿ ಅರಿವನ್ನುಂಟುಮಾಡಿದರು. ||185||
ಈ ರೀತಿ, ಇದು ನನ್ನ ಅಸ್ಚಾಭಾವಿಕ ಹೆಸರು. ಸಾಯಿಯ ಬಾಯಿಯಿಂದ ಬಂದಂತಹ ವಿಷಯದ ಮೂಲದ ಹಿನ್ನೆಲೆ, ಈ ರೀತಿಯ ಅತಿ ಪ್ರಾಮುಖ್ಯವಾದ ನಾಮಕರಣವು ಸಮಯೋಚಿತವಾಗಿ ಅವಕಾಶಕ್ಕನುಗುಣವಾಗಿ ಇತ್ತು. ಇದನ್ನು ನಾನು ಗೌರವ ಎಂದು ತೀರ್ಮಾನಿಸಿದ್ದೇನೆ. ||186||
ಇದರಿಂದಾಗಿ ನಾನು ಒ೦ದು ಪಾಠಕಲಿಯಬೇಕು. ಏನೆಂದರೆ, ವ್ಯರ್ಥವಾದ ವಾಗ್ಯುದ್ಧಗಳು ಕೆಟ್ಟಸಂಕೇತ. ಅದರಲ್ಲಿ ನಾನೆಂದೂ ನಿರತನಾಗದಿರಲಿ, ಏಕೆಂದರೆ ಅವು ಅತ್ಯಂತ ಹಾನಿಕಾರಕ. ||187||
ನನ್ನ ಅಹಂಕಾರವನ್ನು ನೀಗಲೆಂದೇ ಈ ಬಿರುದನ್ನು ನನಗೆ ಕೊಡಲಾಗಿದೆ ಮತ್ತು ಅದರಿಂದ ನಾನು ಸಾಯುವವರೆಗೂ ನಮ್ರನಾಗಿರಬೇಕೆಂಬುದನ್ನು ಮನಸ್ಸಿನಲ್ಲಿ ನೆನಪಿಡಬೇಕು. ||188||
ಶ್ರೀರಾಮನು ದಶರಥನ ಪುತ್ರ. ಭಗವಂತನ ಅವತಾರ, ಸರ್ವವ್ಯಾಪಿ, ಜಗದ್ರಕ್ಷಕ, ಎಲ್ಲ ಮುನಿಪುಂಗವರ ಮನಗಳಲ್ಲಿ ವಾಸವಾಗಿರುವವನು; ಅವನೂ ಗುರು ವಸಿಷ್ಠರ ಚರಣಗಳಿಗೆ ನಮಿಸುತ್ತಿದ್ದನು. ||189|| ಶ್ರೀಕೃಷ್ಣ, ಪರಬ್ರಹ್ಮನ ಅವತಾರವಾಗಿದ್ದರೂ ಸಹ ಗುರುವನ್ನು ಆಶ್ರಯಿಸಬೇಕಾಯಿತು. ಸಾಂದೀಪನಿ ಗುರುಕುಲದಲ್ಲಿ ಕಟ್ಟಿಗೆ (ಸೌದೆ) ಹೊತ್ತು ಕಷ್ಟಪಟ್ಟು ಗುರುಸೇವೆ ಮಾಡಿದನು. ||190||
ಅವರಿಗೆ ಹೋಲಿಸಿದರೆ ನಾನು ಎಷ್ಟರವನು? ನಾನೇಕೆ ವಾದಕ್ಕೆ ಇಳಿಯಲಿ? ಗುರುವಿಲ್ಲದೆ ಜ್ಞಾನವೂ ಇಲ್ಲ. ಸ್ಪರ್ಗೀಯ ಬ್ರಹ್ಮಾನಂದವೂ ಇಲ್ಲ. ಇದೂ ಸಹ ಶಾಸ್ತ್ರಸಮ್ಮತವಾಗಿದೆ. ||191||
ನಿಷ್ಫಲವಾದ ವಾದಸರಣಿ ಒಳ್ಳೆಯದಲ್ಲ. ಅದು ಸ್ಪರ್ಧಾತ್ಮಕವೂ ಆಗಿರಬಾರದು. ಶ್ರದ್ಧೆ ಮತ್ತು ತಾಳ್ಮೆ ಇಲ್ಲದೆ ಎಳ್ಳಷ್ಟೂ ಪರಮಾರ್ಥಸಾಧನೆ ಸಾಧ್ಯವಿಲ್ಲ. ಮೋಕ್ಷವನ್ನೂ ಸಾಧಿಸಲು ಸಾಧ್ಯವಿಲ್ಲ. ||192||
ನನಗೆ ಅನುಭವವೂ ಆಗಿತ್ತು. ಅನಂತರ ಈ ರೀತಿ ನಾನು ವಿನಮ್ರವಾಗಿ ಈ ಬಿರುದನ್ನು ಸ್ಟೀಕರಿಸಿದೆ. ಇದನ್ನು ಪ್ರೀತಿ ಮತ್ತು ಆಶೀರ್ವಾದ ಪೂರ್ವಕವಾಗಿ ನೀಡಲಾಗಿತ್ತು. ||193||
ಈಗ ಈ ಕತೆಯನ್ನು ಒಂದು ಹತಕ್ಕೆ ಅಂತ್ಯಗೊಳಿಸೋಣ. ವಾದಗಳು ಒಂದರ ಮೇಲೊಂದು ಹೆಚ್ಚಾಗಿ ಬಿಸಿ ಬಿಸಿ ಚರ್ಚೆ ಉಗಮವಾಗುತ್ತದೆ. ಅದರಿಂದ ಒಂದನ್ನೊಂದು ಸಮಗೊಳಿಸುವುದು ಎಂಬ ಪಾಠವನ್ನು ಕಲಿಸುತ್ತದೆ. ||194||
ಇದು ಈ ಗ್ರಂಥದ ಆರಂಭ, ರಚನಗಾರನ ಗುಣಗಳನ್ನು ಮತ್ತು ಸಾಯಿಯೊಡನೆ ಇರುವ ಬಾಂಧವ್ಯವನ್ನು ತೋರಿಸುತ್ತದೆ. ಸಾಯಿಯು ಲೇಖಕನಿಗೆ ಮರುನಾಮಕರಣಮಾಡಿ, ಇದನ್ನು ಉಲ್ಲೇಖಿಸಿ ತಾವುಗಳು ಆಲಿಸುವಂತೆ ಮಾಡಿರುವರು. ||195||
ಈ ಅಧ್ಯಾಯವು ಈಗಾಗಲೇ ಉದ್ದವಾಗಿದ್ದು ಇದನ್ನು ಮುಗಿಸೋಣ, ಹೇಮಾದ ಸಾಯಿ ಚರಣಗಲ್ಲಿ ಗೌರವಪೂರ್ವಕವಾಗಿ ನಮಿಸುತ್ತಾನೆ. ಮುಂದುವರೆದು ಕತೆಯನ್ನು ವಿವರವಾಗಿ ತಿಳಿಸಲಾಗುತ್ತದೆ. ದಯಮಾಡಿ ಆಲಿಸಿ. ||196||
ಕೇವಲ ಸಾಯಿ ಮಾತ್ರ ನಮ್ಮ ಆನಂದ ಹಾಗೂ ಸೌಭಾಗ್ಯ. ಕೇವಲ ಸಾಯಿ ಮಾತ್ರ ನಮ್ಮ ಪೂರ್ಣಜ್ಞಾನದಿಂದ ಲಭಿಸಿದವನು. ಕೇವಲ ಸಾಯಿ ಮಾತ್ರ ಶ್ರೇಷ್ಠ ತ್ಯಾಗಿ, ನಮ್ಮ ಅಂತಿಮಗುರಿಯೂ ಸಾಯಿಯೇ. ||197||
ಸಾಯಿಯ ಅನುಗ್ರಹದಿಂದ ನಾವು ಸಾಯಿಯ ಜೀವನ ಚರಿತ್ರೆಯನ್ನು ಕೇಳೋಣ. ಅದರಿಂದ ಭಯಂಕರವಾದ, ಅತಿ ಕ್ಷಿಷ್ಣವಾದ ಸಂಸಾರದಿಂದ ಕಲಿಯುಗದ ಎಲ್ಲ ಕಷ್ಟಗಳನ್ನು ನಿರ್ಮೂಲನಮಾಡಿ ಪಾರಾಗಬಹುದು. ||198||
ಎಲ್ಲರಿಗೂ ಶುಭವಾಗಲಿ.
ಸಂತರು ಮತ್ತು ಸಜ್ಜನರಿಂದ ಪ್ರೇರಿತನಾದ ಭಕ್ತ ಹೇಮಾದಪಂತನು ರಚಿಸಿದ ಶ್ರೀ ಸಾಯಿಸಮರ್ಥ ಸಚ್ಚರಿತೆಯ "ನಾಮಕರಣದ ಉದ್ದೇಶ ಮತ್ತು ಅದರ ವಿವರಣೆ" ಎಂಬ ಎರಡನೆಯ ಅಧ್ಯಾಯವು ಅಲ್ಲಿಗೆ ಮುಗಿಯಿತು.
ಶ್ರೀ ಸಮರ್ಥ ಸದ್ಗುರು ಸಾಯಿನಾಥರ ಚರಣಗಳಿಗೆ ಸಮರ್ಪಣವಾಗಲಿ.
ಹೇಮಾದಪಂತರು ಬಾಳಾಸಾಹೇಬ್ ಜೊತೆ ವಾದಿಸುತ್ತಿರುವುದು |
ಹೇಮಾದಪಂತರು ಸಾಯಿಬಾಬಾ ಅವರ ಚರಣಗಳಿಗೆ ನಮಸ್ಕರಿಸುತ್ತಿರುವುದು |
No comments:
Post a Comment